ಭ್ರಮರಾಂಬೆ ಪಾದ ಸೇರಿದ ಯಕ್ಷಗಾನದ ವಾಲ್ಮೀಕಿ ಖ್ಯಾತಿಯ ಬೊಟ್ಟಿಕೆರೆ ಪುರುಷೋತ್ತಮ ಪೂಂಜ

ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಚಿತ್ರಕೃಪೆ: ಕಿರಣ್ ವಿಟ್ಲ

ಯಕ್ಷಗಾನವು ತನ್ನ ಅಮೂಲ್ಯ ಸುಪುತ್ರನನ್ನು ಕಳೆದುಕೊಂಡಿದೆ.  ಕಟೀಲು ಮೇಳದ ಹಿರಿಯ ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಭ್ರಮರಾಂಬೆಯ ಪಾದ ಸೇರಿದ್ದಾರೆ. ಮಾ ನಿಷಾದ ಸೇರಿದಂತೆ ಅವರು ರಚಿಸಿದ ಪ್ರಸಂಗಗಳು ಅವರಿಗೆ ಯಕ್ಷಗಾನದ ವಾಲ್ಮೀಕಿ ಎಂಬ ಬಿರುದು ತಂದುಕೊಟ್ಟಿವೆ.

ಯಕ್ಷಗಾನದ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರು ಯಕ್ಷಗಾನದ ಸರ್ವಾಂಗ ಪರಿಣಿತರು. ಪರಂಪರೆಯ ಭಾಗವತರು, ವೇಷಧಾರಿ, ಮದ್ದಲೆವಾದಕರು ಮತ್ತು ಕೀರ್ತಿ ಪಡೆದ ಪ್ರಸಂಗಕರ್ತರು. ಅಕಾಡೆಮಿಕ್ಸಲ್ಲಿ B.Sc ಪದವಿಯನ್ನು ಪಡೆದವರು. 

ಪ್ರಧಾನ ಭಾಗವತರಾಗಿ 45 ವರ್ಷ ಅವರು ಪೂರ್ತಿ ಮಾಡಿದ್ದಾರೆ. ಉಪ್ಪಳ ಮೇಳ, ಮುಂಬೈಯ ಪ್ರಸಿದ್ಧ ಗೀತಾಂಬಿಕಾ ಮೇಳ, ಪುತ್ತೂರು ಮೇಳ, ಕರ್ನಾಟಕ ಮೇಳ, ಪ್ರಸಕ್ತ 30 ವರ್ಷಗಳಿಂದ ಕಟೀಲು ದೇವಿಯ ಮೇಳಗಳಲ್ಲಿ ಅವರು ದಣಿವು ಅರಿಯದೆ ಹಾಡಿದ್ದಾರೆ. ಹಿರಿಯ, ಕಿರಿಯ ಎಲ್ಲಾ ಕಲಾವಿದರನ್ನು ಸಮವಾಗಿ ಗೌರವಿಸುವ ನಿಗರ್ವಿ.ಶ್ರೇಷ್ಠವಾದ ಮತ್ತು ಬಹುಶ್ರುತ  ಪಂಡಿತರು.

ಭಾಗವತ ನಿಜವಾದ ಅರ್ಥದಲ್ಲಿ ರಂಗದ ನಿರ್ದೇಶಕ ಆಗಿರಬೇಕು ಎಂದು ಪ್ರತಿಪಾದನೆ ಮಾಡಿದವರು ಮತ್ತು ಅದನ್ನು ಅಕ್ಷರಶಃ ಪಾಲನೆ ಮಾಡಿಕೊಂಡು ಬಂದವರು. ಮೂರು ಶ್ರುತಿಯಲ್ಲಿ ಕೂಡ ಸುಲಲಿತವಾಗಿ ಮತ್ತು ಏಕ ಪ್ರಕಾರವಾಗಿ ಸಂಚರಿಸುವ, ಎಲ್ಲಾ ಭಾವಗಳನ್ನು ಮತ್ತು ರಸಗಳನ್ನು ಪೋಷಣೆ ಮಾಡುವ, ಸಾಹಿತ್ಯಕ್ಕೆ ಒಂದಿಷ್ಟು ಕೂಡ ಅಪಚಾರ ಮಾಡದೆ ಹಾಡುವ ಮಾಧುರ್ಯದ ಕಂಠ ಅವರದ್ದು. ರಾಗ, ತಾಳ, ಭಾವ ಎಲ್ಲವೂ ಎರಕ ಹೊಯ್ದ ಸಿರಿ ಕಂಠ ಅವರದ್ದು. 

ಯಕ್ಷಮಾತೆ ಒಲಿದು ಅವರು ಬರೆದದ್ದು ಒಂದಕ್ಕಿಂತ ಒಂದು ಶ್ರೇಷ್ಟವಾದ 32 ಯಕ್ಷಗಾನದ ಪ್ರಸಂಗಳನ್ನು! ಅದರಲ್ಲಿ ಅತೀ ಹೆಚ್ಚು ಪೌರಾಣಿಕ ಪ್ರಸಂಗಗಳು. ಕನ್ನಡ, ತುಳು ಎರಡೂ ಭಾಷೆಯಲ್ಲಿ ಅವರು ಅದ್ಭುತ ಆಗಿಯೇ ಬರೆದವರು. 

ಎವರ್ ಗ್ರೀನ್ ಪ್ರಸಂಗ "ಮಾ ನಿಷಾದ" ಬರೆದವರು ಅವರೇ! ವಧು ವೈಶಾಲಿನಿ, ನಳಿನಾಕ್ಷ ನಂದಿನಿ, ಉಭಯಕುಲ ಬಿಲ್ಲೋಜ, ಕ್ಷಾತ್ರ ಮೇಧ, ಮಾತಂಗ ಕನ್ಯೆ, ಗಾಂಗೇಯ, ಕಲಿ ಕೀಚಕ, ರಾಜಾ ದ್ರುಪದ, ಮೇಘ ಮಯೂರಿ, ಸ್ವರ್ಣ ನೂಪುರ, ಅಮೃತ ವರ್ಷಿಣಿ, ಮೇಘ ಮಾಣಿಕ್ಯ... ಎಲ್ಲವೂ ಸೂಪರ್ ಹಿಟ್ ಪ್ರಸಂಗಗಳೇ ಆಗಿವೆ. ತುಳು ಭಾಷೆಯಲ್ಲಿ ಕೂಡ ಅವರು ಆರು ಪ್ರಸಂಗಗಳನ್ನು ಬರೆದಿದ್ದಾರೆ. 

   
ಅವರು ಬರೆದ ಯಕ್ಷಗಾನ ಪ್ರಸಂಗಗಳದ್ದೇ ಒಂದು ತೂಕ! ಎಲ್ಲವೂ ಗೇಯತೆ ಪ್ರಧಾನ ಆದವು. ಪುರಾಣದ ಆಳವಾದ ಅಧ್ಯಯನ, ಪಾತ್ರಗಳ ಅದ್ಭುತ ಕಲ್ಪನೆ, ಛಂದಸ್ಸು, ಅಲಂಕಾರ ಮತ್ತು ಸಾಹಿತ್ಯ ಪ್ರಜ್ಞೆಗಳು ಮೇಳೈಸಿದ ರಸಪಾಕ ಅವರ ಪ್ರಸಂಗಗಳು. ಅವರು ಸ್ವತಃ ಭಾಗವತರೇ ಆಗಿ ರಂಗದ ನಡೆ ತಿಳಿದಿರುವ ಕಾರಣ ಅವರ ಎಲ್ಲಾ ಪ್ರಸಂಗಗಳು ಕೂಡ ರಂಗದಲ್ಲಿ ವಿಜೃಂಭಿಸಿದವು."ಮಾ ನಿಷಾದ" ಪ್ರಸಂಗದ ಅದ್ಭುತ  ಪದ್ಯಗಳನ್ನು ಒಮ್ಮೆ ನೀವು ಆಲಿಸಿದರೆ ನಿಮಗೆ ಅವರ ಮೌಲ್ಯ ತಿಳಿಯುತ್ತದೆ. ಅನ್ವರ್ಥವಾಗಿ ಅವರಿಗೆ 'ಯಕ್ಷಗಾನದ ವಾಲ್ಮೀಕಿ' ಎಂಬ ಬಿರುದು ಬಂದಿತು.

ಮುದ್ದಣ ಪ್ರಶಸ್ತಿ, ಮುಂಬೈಯ ಯಕ್ಷ ಮಾನಸ ಪ್ರಶಸ್ತಿ, ಅಕಾಡೆಮಿ ಪುಸ್ತಕ ಸಾಹಿತ್ಯ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಕರ್ನೂರು ಪ್ರಶಸ್ತಿ.... ಹೀಗೆ ಸಾಲು ಸಾಲು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಅವರಿಗೆ ಇಷ್ಟೊಂದು ಕೀರ್ತಿ, ಸಿದ್ಧಿ, ಪ್ರಸಿದ್ದಿಗಳು ಒಲಿದು ಬಂದಿದ್ದರೂ ಕೀರ್ತಿ ಶನಿಯ  ವಿಕಾರಕ್ಕೆ ಒಳಗಾಗದೆ ಕೇವಲ ತಾನಾಯಿತು, ತನ್ನ  ಕೆಲಸವಾಯಿತು ಎಂದು ತಿಳಿದು ಅದರ ಹಾಗೆ ಬದುಕಿದವರು ಅವರು. ತನ್ನ ಮನೆಯನ್ನೇ ಗುರುಕುಲ ಮಾಡಿ ನೂರಾರು ಶಿಷ್ಯರಿಗೆ ಭಾಗವತಿಕೆಯ ಮತ್ತು ಯಕ್ಷಗಾನ ಸಾಹಿತ್ಯದ ತರಗತಿಯನ್ನು ನಡೆಸಿಕೊಂಡು ಬಂದಿದ್ದರು.

ಅಂತಹ ಯಕ್ಷಗಾನದ ಶಕ ಪುರುಷನಿಗೆ ಕಳೆದ ಅರ್ಧ ವರ್ಷದಿಂದ ಸಿಡಿಲು ಬಡಿದಂತೆ ತೀವ್ರ ರಕ್ತ ಸಂಬಂಧಿ ಕಾಯಿಲೆ ಬಂದಿದ್ದು ಮಂಗಳೂರಿನ ಖಾಸಗಿ ನರ್ಸಿಂಗ್ ಹೋಂನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಾ ನೋವಲ್ಲಿ ಮಲಗಿದ್ದರು. 

ವೈದ್ಯಕೀಯದ ಪರಿಭಾಷೆಯಲ್ಲಿ ಅತ್ಯಂತ ಅಪರೂಪದ  MYELODYSPLASIA ಎಂದು ಹೆಸರನ್ನು ಹೊತ್ತ ಅಪರೂಪದ ಕಾಯಿಲೆ ಅದು. ಈಗಿನ್ನೂ 68 ವರ್ಷ ಪ್ರಾಯದ ಬೊಟ್ಟಿಕೆರೆ ಗುರುಗಳು ಮತ್ತೆ ಯಕ್ಷರಂಗಕ್ಕೆ ಮರಳಲು ಕಾತರ ಪಡುತ್ತಿದ್ದರು.

"ನೀವೆಲ್ಲ ವರ್ಕ್ ಫ್ರಮ್ ಹೋಮ್, ನಾನು ವರ್ಕ್ ಫ್ರಮ್ ಹಾಸ್ಪಿಟಲ್!" ಎಂದು ನೋವಿನಲ್ಲಿ ಕೂಡ ನಗಲು ಪ್ರಯತ್ನ ಪಡುತ್ತಿದ್ದರು. ಆದರೆ ಭ್ರಾಮರಿಯ ಮನದಲ್ಲಿ ಬೇರೆಯೇ ಸಂಕಲ್ಪ ಇತ್ತು. ಅದು ಇಂದು ಅವರನ್ನು ಪ್ರೀತಿಯಿಂದ ಕೈ ಹಿಡಿದು ಸ್ವರ್ಗದ ಬಾಗಿಲಿಗೆ ಕರೆದುಕೊಂಡು ಹೋಗಿದೆ. ಯಕ್ಷಗಾನದ ವಾಲ್ಮೀಕಿ ಇನ್ನಿಲ್ಲ ಎಂದರೆ ನಂಬುವುದು ಕಷ್ಟ. ಆದರೂ ಅವರ ಪವಿತ್ರವಾದ ಆತ್ಮಕ್ಕೆ ಚಿರಶಾಂತಿ ಕೋರುವುದು ಮಾತ್ರ ನಾವು ಮಾಡಲು ಸಾಧ್ಯ ಆಗುವ ಕೆಲಸ. ಹರಿ ಓಂ. 

✍ ಲೇಖನ ಕೃಪೆ: ರಾಜೇಂದ್ರ ಭಟ್ ಕೆ., ಶಿಕ್ಷಕರು ಮತ್ತು ವಿಕಸನ ರಾಷ್ಟ್ರ ಮಟ್ಟದ ತರಬೇತುದಾರರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು