ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ನಿಧನ


ಕಾಸರಗೋಡು
: ಹಿರಿಯ ಯಕ್ಷಗಾನ ಕಲಾವಿದರಾದ ಮಾನ್ಯ ತಿಮ್ಮಯ್ಯ (93 ವರ್ಷ) ಇಂದು 09-09-2021 ರಂದು ಮುಂಜಾನೆ ಕಾಸರಗೋಡಿನ ಮಾನ್ಯದಲ್ಲಿ ನಿಧನ ಹೊಂದಿದರು.

ಪುಂಡು ವೇಷ ಮತ್ತು ಸ್ತ್ರೀವೇಷದಲ್ಲಿ ವಿಶೇಷ ಪ್ರಸಿದ್ಧಿ ಪಡೆದಿದ್ದ ಇವರು ಚೊಕ್ಕಾಡಿ, ಧರ್ಮಸ್ಥಳ, ಮಧೂರು, ಕದ್ರಿ, ಮುಲ್ಕಿ, ಉದ್ಯಾವರ ಸೇರಿದಂತೆ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಸಸಿಹಿತ್ಲು ಮೇಳದ ಯಜಮಾನರಾಗಿಯೂ ಕಾರ್ಯನಿರ್ವಹಿಸಿದ ಇವರು ಲಾಭ ನಷ್ಟದ ಲೆಕ್ಕ ಹಾಕದೆ ಯಕ್ಷಗಾನಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಯಕ್ಷಗಾನ ಕಲಾರಂಗ ಸಂಸ್ಥೆಯು ತನ್ನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಇವರನ್ನು ಸಮ್ಮಾನಿಸಿ ಗೌರವಿಸಿದೆ.

ಯಕ್ಷಗಾನ ಕಲಾರಂಗದ ಬಗ್ಗೆ ಅತೀವ ಅಭಿಮಾನ ಹೊಂದಿದ್ದ ಇವರು ಕಳೆದ ಮೂರು ವರ್ಷಗಳ ಹಿಂದೆ ಸಂಸ್ಥೆಯಲ್ಲಿ ತನ್ನ ಹೆಸರಿನ ಪ್ರಶಸ್ತಿಯನ್ನು ಸ್ಥಾಪಿಸಿದ್ದರು.

ಮೃತರು ಬಂಧುಗಳು ಹಾಗೂ ಅಪಾರ ಯಕ್ಷಗಾನ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು