ಯಕ್ಷಗಾನಕ್ಕೆ ಅವಮಾನ: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ವಿಷಾದ ವ್ಯಕ್ತಪಡಿಸಿದ ವಾಹಿನಿ

ಬೆಂಗಳೂರು: ಝೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (ಡಿಕೆಡಿ) ಕಾರ್ಯಕ್ರಮದಲ್ಲಿ ಯಕ್ಷಗಾನದ ವೇಷ ಧರಿಸಿಕೊಂಡು, ಅಸಭ್ಯವಾಗಿ ಕುಣಿಯುತ್ತಾ ಯಕ್ಷಗಾನಕ್ಕೆ, ಕಲೆಗೆ ಅಪಚಾರ ಎಸಗಿದ ವಿಷಯಕ್ಕೆ ಸಂಬಂಧಿಸಿದಂತೆ, ಯಕ್ಷಗಾನ ಅಭಿಮಾನಿಗಳ ಆಕ್ರೋಶಕ್ಕೆ ಮಣಿದಿರುವ ವಾಹಿನಿಯು, ಶನಿವಾರ ಪ್ರಸಾರವಾದ ಕಾರ್ಯಕ್ರಮದಲ್ಲೇ ವಿಷಾದ ವ್ಯಕ್ತಪಡಿಸಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಯಕ್ಷಗಾನ ವೇಷ ಧರಿಸಿ ಅಸಭ್ಯವಾಗಿ ನೃತ್ಯ ಪ್ರದರ್ಶಿಸಿ ಕಲೆಗೆ ಅವಮಾನ ಮಾಡಿರುವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜನರು ಝೀ ವಾಹಿನಿಯನ್ನು ಬಹಿಷ್ಕರಿಸಲು BoycottZeeKannada ಹೆಸರಿನಲ್ಲಿ ಆಂದೋಲನ ನಡೆಸಿದ್ದರು. ಅಲ್ಲದೆ ಕೋಟ ಪೊಲೀಸ್ ಠಾಣೆಗೆ ದೂರನ್ನೂ ಸಲ್ಲಿಸಲಾಗಿತ್ತು. ಈ ಮಧ್ಯೆ, ಕಾರ್ಯಕ್ರಮದ ವೇದಿಕೆಯಲ್ಲೇ ಕ್ಷಮೆ ಕೇಳಬೇಕೆಂದು ಕಳೆದ ಶನಿವಾರದವರೆಗೆ ಗಡುವನ್ನೂ ವಿಧಿಸಲಾಗಿತ್ತು. ಆದರೆ, ಝೀ ವಾಹಿನಿಯು ಸಾಮಾಜಿಕ ಜಾಲತಾಣದಲ್ಲಷ್ಟೇ ಕ್ಷಮೆ ಯಾಚಿಸಿತ್ತು.

ಇದರಿಂದ ನೊಂದ ಯಕ್ಷಗಾನ ಅಭಿಮಾನಿಗಳು, ವಸಂತ ಗಿಳಿಯಾರ್ ನೇತೃತ್ವದಲ್ಲಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರನ್ನೂ ಸೇರಿಸಿಕೊಂಡು ಝೀ ವಾಹಿನಿ ಕಚೇರಿಗೇ ತೆರಳಿ, ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು.

ಇದೀಗ, ನಿನ್ನೆ ಶನಿವಾರದ ಕಾರ್ಯಕ್ರಮದಲ್ಲಿ, ಡಿಕೆಡಿ ನಿರೂಪಕಿ ಅನುಶ್ರೀ ಅವರು ಯಕ್ಷಗಾನ ಕಲೆಗೆ ಅವಮಾನ ಆಗಿರುವುದನ್ನು ಒಪ್ಪಿಕೊಂಡು, ವಿಷಾದ ವ್ಯಕ್ತಪಡಿಸಿದ್ದಾರೆ. ಯಾವತ್ತೂ ಕಲೆಯನ್ನು ಗೌರವಿಸುವವರು ನಾವು, ಇದು ಅಚಾತುರ್ಯದಿಂದ ಆದ ಪ್ರಮಾದ. ಈ ಕುರಿತು ಝೀ ವಾಹಿನಿಯು ಎಚ್ಚರ ವಹಿಸುತ್ತದೆ ಎಂದು ಭರವಸೆಯನ್ನೂ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು