ಪುರಾಣ ತಿಳಿಯೋಣ ಸರಣಿ By ದಾಮೋದರ ಶೆಟ್ಟಿ, ಇರುವೈಲು
ಇದು ರಾಮಾಯಣದಲ್ಲಿರುವ ಅತ್ಯಂತ ವಿವಾದಗ್ರಸ್ತ ಪ್ರಕರಣ. ಶಂಬೂಕ (ಸಂಸ್ಕೃತದಲ್ಲಿ Śambūka शम्बूक) ವಧೆ. ಕೆಲ ಬುದ್ಧಿಜೀವಿಗಳು ಕ್ಷತ್ರಿಯನಾದ ಶ್ರೀರಾಮನು ಶೂದ್ರ ವಿರೋಧಿ ಅಂತ ಸಾಬೀತುಪಡಿಸಲು ಈ ಕಥೆಯನ್ನು ಆಗಾಗ ಉದ್ಧರಿಸುವುದು ನಮಗೆಲ್ಲ ತಿಳಿದಿರುವ ವಿಷಯ.
ರಾಮಾಯಣ ಮಹಾಕಾವ್ಯದ ಉತ್ತರಕಾಂಡದಲ್ಲಿ ಶೂದ್ರ ತಪಸ್ವಿ ಶಂಬೂಕನ ಕಥೆ ಇದೆ. ಈ ಶಂಬೂಕನು ಮರದ ರೆಂಬೆಯಲ್ಲಿ ತಲೆ ಕೆಳಗಾಗಿಸಿ ತಪಸ್ಸನ್ನಾಚರಿಸುತ್ತಿದ್ದನಂತೆ. ಅದೇ ಸಂದರ್ಭದಲ್ಲಿ ರಾಮನ ರಾಜ್ಯದಲ್ಲಿ ಒಬ್ಬ ಬ್ರಾಹ್ಮಣನ ಮಗ ಅಕಾಲಿಕ ಮರಣಕ್ಕೆ ಒಳಗಾಗುತ್ತಾನೆ. ಹೀಗಾಗಿ ನ್ಯಾಯ ಕೇಳುವ ಸಲುವಾಗಿ ಬ್ರಾಹ್ಮಣನು ಶ್ರೀರಾಮನ ಆಸ್ಥಾನಕ್ಕೆ ಬಂದು, 'ನಿನ್ನ ಆಡಳಿತದಲ್ಲಿ ಯಾವುದೋ ಧರ್ಮ-ವಿರೋಧವಾದ ಘಟನೆ ನಡೆಯುತ್ತಿರುವುದರಿಂದ ನನ್ನ ಮಗ ಸಾವಿಗೀಡಾಗಿದ್ದಾನೆ' ಎಂದು ಅಳಲು ತೋಡಿಕೊಳ್ಳುತ್ತಾನೆ.
ತಕ್ಷಣ ರಾಮನು ಪುಷ್ಪಕ ವಿಮಾನ ಏರಿ ದಕ್ಷಿಣ ದಿಕ್ಕಿಗೆ ಬಂದಾಗ, ಅಲ್ಲಿ ಶಂಬೂಕನೆಂಬ ತಪಸ್ವಿಯನ್ನು ಕಾಣುತ್ತಾನೆ. ಈತನು ಯುಗಧರ್ಮ ಮೀರಿ ಸಶರೀರಿಯಾಗಿ ಸ್ವರ್ಗಕ್ಕೆ ಹೋಗಬೇಕೆಂದು ಘೋರ ತಪಸ್ಸು ಮಾಡುತ್ತಿರುತ್ತಾನೆ. ಅವನ ಉದ್ದೇಶವನ್ನು ಅವನಿಂದಲೇ ತಿಳಿದ ರಾಮ, ತತ್ ಕ್ಷಣದಲ್ಲಿಯೇ ತನ್ನ ಖಡ್ಗದಿಂದ ಶಂಬೂಕನ ತಲೆ ಹಾರಿಸುತ್ತಾನೆ.
ಇದೇ ಅತಿ ಹೆಚ್ಚು ವಿವಾದಗ್ರಸ್ತವಾಗಿರುವ ಪ್ರಸಂಗ. ರಾಮನು "ಶೂದ್ರ ದ್ವೇಷಿ" ಎಂಬುದಾಗಿ ಬಿಂಬಿಸುವವರಿಗೆ ಸಿಕ್ಕಿರುವ ಬ್ರಹ್ಮಾಸ್ತ್ರವಿದು.
ಅನೇಕ ವಿದ್ವಾಂಸರ ಪ್ರಕಾರ, ವಾಲ್ಮೀಕಿ ಬರೆದ ರಾಮಾಯಣ ಇರುವುದು ಶ್ರೀರಾಮಚಂದ್ರನ ಪಟ್ಟಾಭಿಷೇಕ ಆಗುವವರೆಗೆ ಮಾತ್ರ. ಆನಂತರ 'ಉತ್ತರಕಾಂಡ' ಇನ್ಯಾರೋ ಸೇರಿಸಿರಬೇಕು ಅನ್ನುವ ಅಭಿಪ್ರಾಯವಿದೆ.
1. ಮೂಲ ರಾಮಾಯಣದ ಪ್ರಕಾರ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ನಂತರ ಪುಷ್ಪಕವಿಮಾನವನ್ನು ರಾಮನು ಕುಬೇರನಿಗೆ ಹಿಂತಿರುಗಿಸುತ್ತಾನೆ.
ಆದರೆ ಈ ಉತ್ತರಕಾಂಡದ ಈ ಪ್ರಸಂಗದಲ್ಲಿ ಶ್ರೀರಾಮಚಂದ್ರನು ಪುಷ್ಪಕ ವಿಮಾನವನ್ನೇರಿ ಶಂಬೂಕನಿದ್ದೆಡೆಗೆ ಬಂದ ಉಲ್ಲೇಖವಿದೆ.
2. ಶ್ರೀರಾಮಚಂದ್ರನು 'ಶೂದ್ರ ದ್ವೇಷಿ' ಆಗಿದ್ದರೆ ಗುಹ, ಶಬರಿ ಇವರೆಲ್ಲರ ಸ್ನೇಹ ವಿಶ್ವಾಸವನ್ನು ಗಳಿಸುತ್ತಿರಲಿಲ್ಲ.
3. ಶ್ರೀ ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಯು ಪೂರ್ವಾಶ್ರಮದಲ್ಲಿ ಬೇಡರ ಕುಲದವರಾಗಿದ್ದರು.
4. ಪ್ರಪಂಚದಾದ್ಯಂತ ನೂರಾರು ವಿಭಿನ್ನ ರಾಮಾಯಣಗಳನ್ನು ವಿದ್ವಾಂಸರು ಗುರುತಿಸುತ್ತಾರೆ. ಇಂಡೋನೇಷ್ಯಾದ ರಾಮಾಯಣದಲ್ಲಿ ಉತ್ತರಕಾಂಡದ ಭಾಗ ಇಲ್ಲದಿರುವುದು ಮತ್ತೊಂದು ವಿಶೇಷ. ತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ...!
5. ಉತ್ತರ ಕಾಂಡದಲ್ಲಿರುವಂತಹಾ ಭಾಷೆಗೂ ರಾಮಾಯಣದ ಮೂಲಕೃತಿಯ ಭಾಷೆಗೂ ವ್ಯತ್ಯಾಸವನ್ನು ವಿದ್ವಾಂಸರು ಗುರುತಿಸಿರುತ್ತಾರೆ. ಆದುದರಿಂದ ಉತ್ತರ ಕಾಂಡ ಪ್ರಕ್ಷಿಪ್ತವಾಗಿರುವ ಸಾಧ್ಯತೆಯೂ ಇಲ್ಲದಿಲ್ಲ.
ನನ್ನ ಪ್ರಕಾರ ಶ್ರೀರಾಮನು ಶಂಬೂಕನ ತಲೆ ಕತ್ತರಿಸಿದುದು ಸರಿಯಾಗಿಯೇ ಇದೆ. ಶಂಬೂಕ ಒಬ್ಬ ಶೂದ್ರನಾಗಿ ತಪಸ್ಸನ್ನಾಚರಿಸಿದುದಕ್ಕೆ ಅವನ ತಲೆ ಕತ್ತರಿಸಿದುದಲ್ಲ. ತಪಸ್ಸು ಯಾರು ಕೂಡ ಮಾಡಬಹುದು. ಆದರೆ ತಪಸ್ಸು ಮಾಡುತ್ತಿರುವ ಆತನ ಉದ್ದೇಶ ಸಾಧುವಾಗಿರಲಿಲ್ಲ. ಸಶರೀರಿಯಾಗಿ ಸ್ವರ್ಗಕ್ಕೆ ಹೋಗುವ ಆತನ ಇಚ್ಛೆಯು ಮಾನವರಿಗೆ ಹೇಳಿಸಿದುದಲ್ಲ. ಮನುಷ್ಯರ ಪಾಂಚಭೌತಿಕ ದೇಹವು ಸ್ವರ್ಗದ ಸ್ಥಿತಿಯನ್ನು ತಾಳಿಕೊಳ್ಳಲಾರದು. (ದೇವತೆಗಳೇ ಮಾನವರನ್ನು ಸಹಾಯಕ್ಕಾಗಿ ಸ್ವರ್ಗಕ್ಕೆ ಕರೆಸಿದ ಸಂದರ್ಭ ಹೊರತುಪಡಿಸಿ.) ತಪಸ್ಸಿನ ಫಲವು ರಾಜ್ಯದ ಪ್ರಜೆಗಳಿಗೆ ಕಂಟಕಪ್ರಾಯವಾಯಿತು, ಅಪಮೃತ್ಯುಗೆ ಕಾರಣವಾಗುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ.
ತನ್ನ ವಂಶದವನೇ ಆದ ತ್ರಿಶಂಕು ಮಹಾರಾಜನು ಸಶರೀರಿಯಾಗಿ ಸ್ವರ್ಗಕ್ಕೆ ಹೋಗಲು ಪ್ರಯತ್ನಿಸಿ ಮಾಡಿಕೊಂಡ ಎಡವಟ್ಟು ರಾಮನಿಗೆ ತಿಳಿದಿತ್ತು. ಆದುದರಿಂದ ಇಂತಹ ಎಡವಟ್ಟು ಮತ್ತೊಮ್ಮೆ ಮರುಕಳಿಸಬಾರದೆಂದು ತಲೆ ಕತ್ತರಿಸಿರಬಹುದು. ಆತನ ತಲೆ ಕತ್ತರಿಸಿದ ತಕ್ಷಣ ಇತ್ತ ಬ್ರಾಹ್ಮಣ ಬಾಲಕ ಬದುಕಿದನಂತೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ