ಕಟೀಲು ಕ್ಷೇತ್ರದಿಂದ ಮತ್ತೊಂದು ಮೇಳ| 7ನೇ ಮೇಳ ಆರಂಭಕ್ಕೆ ದೇವಿ ಒಪ್ಪಿಗೆ


ಮಂಗಳೂರು:
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ದಶಾವತಾರ ಯಕ್ಷಗಾನ ಮಂಡಳಿಗೆ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚುತ್ತಿರುವಂತೆಯೇ ಮುಂದಿನ ಸಾಲಿನಿಂದ ಮತ್ತೊಂದು ಹೊಸ ಯಕ್ಷಗಾನ ಮೇಳವು ಹೊರಡಲಿದೆ.

ಈಗಾಗಲೇ ಆರು ಯಕ್ಷಗಾನ ಮೇಳಗಳಿಂದ ಸಮೃದ್ಧ ಕಲಾ ಪ್ರಸಾರ ಮಾಡುತ್ತಿರುವ ಕಟೀಲು ಕ್ಷೇತ್ರದಿಂದ 2025-26 ಸಾಲಿನಲ್ಲಿ 7ನೇ ಮೇಳವನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣರು ಹೇಳಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ. 

ಕಟೀಲು ದೇವಳದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಹೊಸದಾಗಿ 7ನೇ ಮೇಳ ಆರಂಭಿಸುವ ಬಗ್ಗೆ ಭಾನುವಾರ ಆಡಳಿತ ಮಂಡಳಿ, ಅರ್ಚಕ ವರ್ಗ, ಮೇಳದ ಆಡಳಿತ ಮತ್ತು ಪ್ರಮುಖರ ಉಪಸ್ಥಿತಿಯಲ್ಲಿ ಮಹಾಪೂಜೆಯ ಬಳಿಕ ವಿಶೇಷ ಪ್ರಾರ್ಥನೆ ಮೂಲಕ ದುರ್ಗೆಯ ಸನ್ನಿಧಿಯಲ್ಲಿ ಅರಿಕೆ ಮಾಡಿದ ಸಂದರ್ಭದಲ್ಲಿ ದೇವಿಯ ಒಪ್ಪಿಗೆ ದೊರೆತಿದೆ ಎಂದು ಅವರು ತಿಳಿಸಿದರು.
ಯಾವಾಗ ಎಷ್ಟನೇ ಮೇಳ ಆರಂಭ?
ಕಟೀಲು ಕ್ಷೇತ್ರದ 1ನೇ ಯಕ್ಷಗಾನ ಮೇಳದ ಆರಂಭದ ಬಗ್ಗೆ ನಿಖರ ಮಾಹಿತಿಯಿಲ್ಲ.
2ನೇ ಮೇಳ 1965ರಲ್ಲಿ
3ನೇ ಮೇಳ 82-83ರಲ್ಲಿ
4ನೇ ಮೇಳೆ 93-94ರಲ್ಲಿ
5ನೇ ಮೇಳ 2010-11ರಲ್ಲಿ
6ನೇ ಮೇಳ 2013-14 ರಲ್ಲಿ ಆರಂಭಗೊಂಡಿತ್ತು.
7ನೇ ಮೇಳ 2025 ನ.16ರಂದು.

ಕಟೀಲಿನ 7ನೇ ಮೇಳವು ಮುಂದಿನ ತಿರುಗಾಟ ಆರಂಭವಾಗುವ ನವೆಂಬರ್ 16ರಂದು ದಿಗ್ವಿಜಯ ಆರಂಭಿಸಲಿದೆ.

7ನೇ ಮೇಳಕ್ಕೆ ಬೇಕಾದ ಚಿನ್ನದ ಕಿರೀಟ ಈಗಾಗಲೇ ಇದೆ. ತೊಟ್ಟಿಲು ಸೇರಿದಂತೆ ಮೇಳದ ಪರಿಕರಗಳಿಗೆ ಈಗಾಗಲೇ ಭಕ್ತರು ಆಸಕ್ತಿ ವಹಿಸಿದ್ದಾರೆ. ದೇವಳಕ್ಕೆ ಯಾವುದೇ ಖರ್ಚು ಬಾರದ ರೀತಿಯಲ್ಲಿ 7ನೇ ಮೇಳ ಆರಂಭಗೊಳ್ಳಲಿದೆ. 7ನೇ ಮೇಳಕ್ಕೆ ಕಲಾವಿದರ ಕೊರತೆಯೂ ಇಲ್ಲ. ಈಗಿರುವ 6 ಮೇಳಗಲ್ಲಿ ಪ್ರಬುದ್ಧ ಕಲಾವಿದರಿದ್ದಾರೆ ಮತ್ತು ಉತ್ತಮ ಅನುಭವ ಇರುವ ಹವ್ಯಾಸಿ ಕಲಾವಿದರೂ ಇದ್ದಾರೆ. ಹೊಸ ಮೇಳಕ್ಕೆ ಬೇಕಾದ ಬಸ್ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಆಸ್ರಣ್ಣರು ತಿಳಿಸಿದರು.

ವೀಳ್ಯದ ಹೆಚ್ಚಳ, ಕಲಾವಿದರ ಸಂಭಾವನೆ ಏರಿಕೆ ಮತ್ತಿತರ ವಿಷಯಗಳ ಬಗ್ಗೆ ಈ ವರ್ಷದ ನವೆಂಬರ್ 16ರಂದೇ ನಿರ್ಧರಿಸಲಾಗುವುದು. ಪ್ರತಿವರ್ಷ ಸುಮಾರು 180 ದಿನಗಳಲ್ಲಿ 1080 ಪ್ರದರ್ಶನಗಳಿದ್ದು, ಅವುಗಳಲ್ಲಿ 450 ಶಾಶ್ವತ ಪ್ರದರ್ಶನಗಳು. ಹರಕೆಯಾಟದ ಬೇಡಿಕೆಗಳನ್ನು ಮನಗಂಡು, ಮಧ್ಯೆ ಯಾರಾದರೂ ಅನಿವಾರ್ಯ ಕಾರಣಗಳಿಂದಾಗಿ ಆಟ ಆಡಿಸಲು ಅಸಾಧ್ಯವಾದಾಗ, ಸರದಿಯಲ್ಲಿರುವ ಅನ್ಯರಿಗೆ ಈ ಅವಕಾಶ ನೀಡುವಂತಾಗಲು 2013-14ರಲ್ಲಿ ತತ್ಕಾಲ್ ವ್ಯವಸ್ಥೆ ಆರಂಭಿಸಲಾಗಿತ್ತು. ಸುಮಾರು 240 ಪ್ರದರ್ಶನಗಳನ್ನು ತತ್ಕಾಲ್ ಮೂಲಕವೂ ನೀಡಲಾಗುತ್ತದೆ. ಈ ವರ್ಷ ಸುಮಾರು 844 ಹೆಚ್ಚುವರಿ ಬುಕ್ಕಿಂಗ್ ಆಗಿದ್ದು, ಈಗಾಗಲೇ ಸುಮಾರು 7000 ಪ್ರದರ್ಶನ ಬುಕ್ಕಿಂಗ್ ಆಗಿದೆ ಎಂದು ಆಸ್ರಣ್ಣರು ಹೇಳಿದರು.

ಮೇಳದಲ್ಲಿ ನ್ಯಾಯವಾದಿಗಳು, ಎಂಜಿನಿಯರ್‌ಗಳು, ಉಪನ್ಯಾಸಕರು, ಡಾಕ್ಟರೇಟ್ ಪಡೆದವರು, ಸರಕಾರಿ ಉದ್ಯೋಗಿಗಳು ಹಾಗೂ ಖಾಸಗಿ ಉದ್ಯೋಗಿಗಳೆಲ್ಲರೂ ಇದ್ದಾರೆ. ವಿದ್ಯಾವಂತ ಕಲಾವಿದರ ತಂಡವೇ ಇದೆ. ಹೊಸ ಕಲಾವಿದರಿಗೆ ಯಕ್ಷಗಾನದ ತರಬೇತಿ ನೀಡಲು ತರಬೇತಿ ಶಾಲೆಯೊಂದನ್ನು ಆರಂಭಿಸುವ ಚಿಂತನೆಯಿದೆ. ಇದಲ್ಲದೆ, ಕರಾವಳಿಯ ಹೊರಗೆ, ಬೆಂಗಳೂರು-ಮೈಸೂರುಗಳಲ್ಲೂ ಮೇಳದ ಪ್ರದರ್ಶನಕ್ಕೆ ಬೇಡಿಕೆ ಬಂದಿದೆ. ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸಿ ಈ ಕುರಿತು ಗಮನ ಹರಿಸಲಾಗುತ್ತದೆ.

7ನೇ ಮೇಳ ಆರಂಭದಿಂದ ಯಕ್ಷಗಾನ ಪ್ರದರ್ಶನಕ್ಕಾಗಿ ಭಕ್ತರ ಬೇಡಿಕೆಯ ಒತ್ತಡವನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಸ್ವಲ್ಪ ಮಟ್ಟಿಗೆ ನಿಭಾಯಿಸುವ ಪ್ರಯತ್ನ ಮಾಡಬಹುದು ಎಂದ ಅವರು, ಕಾನೂನಿನ ತೊಡಕಿನಿಂದಾಗಿ ಈಗಿರುವ ರೀತಿಯಲ್ಲೇ ಕಾಲಮಿತಿಯ ಯಕ್ಷಗಾನ ಪ್ರದರ್ಶನ ಮುಂದುವರಿಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಟೀಲು ದೇವಳದ ಅಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ದೇವಳದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಬಿಪಿನ್ ಪ್ರಸಾದ್ ಕೊಡೆತ್ತೂರು ಗುತ್ತು, ಪ್ರವೀಣ್ ಭಂಡಾರಿ, ಐಕಳ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭ, ಮೇ 25ರಂದು ಕಟೀಲು ಕ್ಷೇತ್ರದ ಆರೂ ಮೇಳಗಳ 2024-25ನೇ ಸಾಲಿನ ತಿರುಗಾಟ ಸಂಪನ್ನಗೊಂಡಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಕೊನೆಯ ಪ್ರದರ್ಶನವು ಭಾನುವಾರ ಮಳೆಯ ನಡುವೆ ಕಟೀಲು ರಥಬೀದಿಯಲ್ಲಿ ನಡೆಯಿತು. ಚೌಕಿ ಪೂಜೆಯ ಬಳಿಕ ಪಂಚಕಲ್ಯಾಣ ಪ್ರಸಂಗಗಳಾದ - ಹೈಮವತೀ-ಶ್ರೀಮತೀ-ವಿದ್ಯುನ್ಮತೀ-ಜಾಂಬವತೀ-ಪದ್ಮಾವತೀ ಪರಿಣಯ ಯಕ್ಷಗಾನ ಪ್ರದರ್ಶನಗಳು ನಡೆದವು. ಸೋಮವಾರ ಬೆಳಗ್ಗೆ ಕಟೀಲು ದೇವಳದಲ್ಲಿ ಗೆಜ್ಜೆ ಬಿಚ್ಚುವ ಸಂಪ್ರದಾಯದೊಂದಿಗೆ ಈ ವರ್ಷದ ಪ್ರದರ್ಶನಗಳಿಗೆ ತಾತ್ಕಾಲಿಕ ವಿರಾಮ ದೊರೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು