ಆ.08ರಂದು ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ ಆನ್‌ಲೈನ್ ಸಮಾಲೋಚನೆ

ಕನ್ನಡ ಸಾಹಿತ್ಯದ ಶ್ರೀಮಂತಿಕೆಗೆ ಯಕ್ಷಗಾನ ಸಾಹಿತ್ಯದ ಕೊಡುಗೆ ವಿಷಯದ ಕುರಿತು ಇದೇ ಭಾನುವಾರ (ಆಗಸ್ಟ್ 08) ಆನ್‌ಲೈನ್ ಸಮಾವೇಶ ನಡೆಯಲಿದೆ.

ಯಕ್ಷವಾಹಿನಿ (ರಿ.) ವತಿಯಿಂದ ನಡೆಯುವ ಈ ಸಮಾವೇಶವು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 12.30 ರ ತನಕ ನಡೆಯಲಿದೆ.

ಯಕ್ಷಗಾನ ಸಾಹಿತ್ಯದ ವೈವಿಧ್ಯ ಹಾಗೂ ವೈಶಿಷ್ಟ್ಯಗಳ ಅವಲೋಕನ, ಯಕ್ಷಗಾನೇತರ ಕನ್ನಡ ಸಾಹಿತ್ಯಲೋಕದ ದಿಗ್ಗಜರಿಂದ ಯಕ್ಷಗಾನ ಸಾಹಿತ್ಯದ ವಿಮರ್ಶೆ, ಯಕ್ಷಗಾನದ ಛಂದೋಬದ್ಧ ಗೇಯ ಸಾಹಿತ್ಯದ ತಳಹದಿಯಾಗಿರುವ ಛಂದಸ್ಸಿನ ಬಂಧಗಳ ಸುತ್ತ ಲಯಬದ್ಧ ಮಟ್ಟುಗಳ ಅಸ್ತಿತ್ವ ಹಾಗೂ ರಾಗ ತಾಳ, ಶೈಲಿಗಳ ವೈವಿಧ್ಯದ ಮೂಲಕ ಯಕ್ಷಗಾನ ಪ್ರಸಂಗ ಸಾಹಿತ್ಯವು ಹಿಮ್ಮೇಳವನ್ನು ವೈಭವೀಕರಿಸುವ ಕುರಿತಾಗಿ ಸಮಾಲೋಚನೆ ನಡೆಯಲಿದೆ.

ಯಕ್ಷಗಾನದ ಹಿರಿಯ ವಿದ್ವಾಂಸರಾದ ಪ್ರೊ. ಎಂ.ಎಲ್.ಸಾಮಗ, ಶ್ರೀಧರ ಡಿ.ಎಸ್., ಗಿಂಡಿಮನೆ ಮೃತ್ಯುಂಜಯ, ಡಾ.ಆನಂದರಾಮ ಉಪಾಧ್ಯ, ಮಹಾಬಲೇಶ್ವರ ಭಟ್ಟ ಇಟಗಿ ಮತ್ತು ರವಿ ಮಡೋಡಿ, ಅಜಿತ್ ಕಾರಂತ, ಆಶ್ವಿನಿ ಹೊದಲ ಭಾಗವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಲೋಕದ ದಿಗ್ಗಜರಾದ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ, ಡಾ.ಚಿಂತಾಮಣಿ ಕೂಡ್ಲಕೆರೆ, ಡಾ.ಚೆಕ್ಕೆರೆ ಶಿವಶಂಕರ ಅವರು ಯಕ್ಷಗಾನದ ಸಾಹಿತ್ಯ ಕುರಿತು ವಿಮರ್ಶಾತ್ಮಕವಾಗಿ ಅವಲೋಕಿಸಲಿದ್ದಾರೆ.

ನಟರಾಜ ಉಪಾಧ್ಯ ಅವರ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರಾದ ಪುತ್ತೂರು ರಮೇಶ್ ಭಟ್ ಹಾಗೂ ಅನಂತ ಪದ್ಮನಾಭ ಫಾಟಕ್ ಅವರು ಛಂದಸ್ಸು-ಮಟ್ಟುಗಳ ಅನ್ಯೋನ್ಯತೆಯನ್ನು ಗಾಯನದ ಮೂಲಕ ಪ್ರಸ್ತುತಪಡಿಸಲಿದ್ದಾರೆ.

ತೆಂಕು ಬಡಗು ಶೈಲಿಯ ಭಾಗವತಿಕೆಯ ಮೂಲಕ ಪ್ರಸ್ತುತಿ, ಕನ್ನಡ ಸಾಹಿತ್ಯ ಲೋಕದಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಹೆಚ್ಚಿನ ಮನ್ನಣೆಯತ್ತ ಚಿಂತನೆ, ಪ್ರಶ್ನೋತ್ತರಗಳು ಹಾಗೂ ಸಂಬಂಧಿತ ವಿಚಾರ ವಿನಿಮಯಗಳು ಕೂಡ ನಡೆಯಲಿವೆ.

ಯೂಟ್ಯೂಬ್‌ ಹಾಗೂ ಫೇಸ್ಬುಕ್‌ ಮೂಲಕ ನಡೆಯುವ ಸಮಾನಾಂತರ ಬಿತ್ತರವನ್ನು ನೋಡಲು ಕೊಂಡಿಗಳನ್ನು ಕೆಳಗೆ ಕೊಡಲಾಗಿದೆ.



ಯಕ್ಷಗಾನ ಕಲಾಭಿಮಾನಿಗಳು ಭಾಗವಹಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು