ಅ.3ರಂದು ಮಿಜಾರು ಮೋಹನ ಶೆಟ್ಟಿಗಾರರಿಗೆ ಕಡಬ ಸಂಸ್ಮರಣೆ ಪ್ರಶಸ್ತಿ, ಯಕ್ಷಗಾನ


ಮಂಗಳೂರು: ಯಕ್ಷಗಾನ ಕಲಾವಿದರಾದ ಕಡಬ ನಾರಾಯಣಾಚಾರ್ಯ ಹಾಗೂ ಪುತ್ರ ವಿನಯ ಆಚಾರ್ಯ ಅವರ ನೆನಪಿನಲ್ಲಿ ಪ್ರತಿ ವರ್ಷ ನೀಡಲಾಗುವ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ 2021ಕ್ಕೆ ಹಿರಿಯ ಮದ್ದಳೆಗಾರರಾದ ಮಿಜಾರು ಮೋಹನ ಶೆಟ್ಟಿಗಾರ್ ಅವರು ಆಯ್ಕೆಯಾಗಿದ್ದಾರೆ.

ಮಂಗಳೂರಿನ ಕಡಬ ಸಂಸ್ಮರಣಾ ಸಮಿತಿ, ರಥಬೀದಿ ಮೂಲಕ ಅಕ್ಟೋಬರ್ 3ರಂದು ಭಾನುವಾರ ಅಪರಾಹ್ನ 2 ಗಂಟೆಗೆ ಮೂಡುಬಿದಿರೆಯ ಗುರುಮಠ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ದೇವಳದ ಮೊಕ್ತೇಸರರಾದ ಸುಂದರ ಆಚಾರ್ಯ ಬೆಳುವಾಯಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಆಡಳಿತ ಮೊಕ್ತೇಸರ, ಪುರೋಹಿತ್ ಜಯಕರ ಆಚಾರ್ಯ ಅವರು ದೀಪ ಬೆಳಗಲಿದ್ದು, ಆಳ್ವಾಸ್ ಎಜುಕೇಶನ್ ಫೌಂಡೇಶನ್ ಮುಖ್ಯಸ್ಥರಾದ ಡಾ.ಎಂ.ಮೋಹನ್ ಆಳ್ವ, ಧನಲಕ್ಷ್ಮಿ ಉದ್ಯಮ ಸಮೂಹದ ಕೆ.ಶ್ರೀಪತಿ ಭಟ್, ಎಸ್.ಕೆ.ಎಫ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ಜಿ.ರಾಮಕೃಷ್ಣ ಆಚಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮುಂಬಯಿಯ ಉದ್ಯಮಿ ಜಿ.ಟಿ.ಆಚಾರ್ಯ ಉಪಸ್ಥಿತರಿರುವರು. ಕಲಾವಿದ ವಾದಿರಾಜ ಕಲ್ಲೂರಾಯರು ಅಭಿನಂದನ ಭಾಷಣ ಮಾಡಲಿದ್ದು, ಯಕ್ಷಸಂಗಮ ಮೂಡುಬಿದಿರೆ ಇದರ ಸಂಚಾಲಕ ಶಾಂತರಾಮ ಕುಡ್ವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ.
ಸಂಜೆ 4ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ, ಶೇಣಿ ಗೋಪಾಲಕೃಷ್ಣ ಭಟ್ ವಿರಚಿತ 'ಶ್ರೀಮತಿ ಪರಿಣಯ' ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ್ ಅಮ್ಮಣ್ಣಾಯ, ಅಮೃತಾ ಅಡಿಗ ಪುತ್ತಿಗೆ, ಮೋಹನ ಕಲಂಬಾಡಿ; ಚೆಂಡೆ-ಮದ್ದಳೆಯಲ್ಲಿ ಐ.ದೇವಿಪ್ರಸಾದ್ ಕಟೀಲು, ಐ.ಲೋಕೇಶ್ ಕಟೀಲು, ಯೋಗೀಶ್ ಆಚಾರ್ಯ ಉಳೆಪಾಡಿ, ಜಯರಾಮ ಆಚಾರ್ಯ ಚೇಳಾಯರು, ಗಿರೀಶ್ ಕಾವೂರು, ಸೂರಜ್ ಮೂಲ್ಕಿ, ಚೇತನ್ ಸಚ್ಚರಿಪೇಟೆ ಭಾಗವಹಿಸಲಿದ್ದಾರೆ.

ಮುಮ್ಮೇಳದಲ್ಲಿ, ಎಂ.ಕೆ.ರಮೇಶ ಆಚಾರ್ಯ, ಜಯರಾಮ ಆಚಾರ್ಯ ಬಂಟ್ವಾಳ, ಸದಾಶಿವ ಕುಲಾಲ್ ವೇಣೂರು, ಗಣೇಶ ಅರಳ, ವಾದಿರಾಜ ಕಲ್ಲೂರಾಯ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ರಕ್ಷಿತ್ ಶೆಟ್ಟಿ ಪಡ್ರೆ, ಸತೀಶ್ ನೀರ್ಕೆರೆ, ರಾಜೇಶ್ ಆಚಾರ್ಯ ಪುತ್ತಿಗೆ, ಪ್ರದೀಪ ಮೂಡುಬಿದಿರೆ, ಯತೀಶ್ ಕಾರ್ಕಳ ಭಾಗವಹಿಸಲಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 3 ದಶಕಗಳ ಕಾಲ ಅದ್ಭುತ ಚೆಂಡೆ-ಮದ್ದಳೆವಾದಕರಾಗಿ ಮೆರೆದ ಕಡಬ ನಾರಾಯಣ ಆಚಾರ್ಯ ಹಾಗೂ ಸುಮಾರು 15 ವರ್ಷಗಳ ಕಾಲ ಅದ್ಭುತ ಮದ್ದಳೆವಾದನದಿಂದ ಗಮನ ಸೆಳೆದಿರುವ ಅವರ ಪುತ್ರ ವಿನಯ ಆಚಾರ್ಯ - ಇಬ್ಬರೂ ಅಕಾಲಿಕ ಮರಣಕ್ಕೆ ತುತ್ತಾದವರು. ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷವೂ ಯಕ್ಷಗಾನ ಕ್ಷೇತ್ರದ ಸಾಧಕರನ್ನು ಗುರುತಿಸುವ ಕಾರ್ಯವನ್ನು ಕಡಬ ಸಂಸ್ಮರಣಾ ಸಮಿತಿಯು ಕಳೆದ ವರ್ಷದಿಂದ ಆರಂಭಿಸಿದೆ. ಮೊದಲ ಕಡಬ ಸಂಸ್ಮರಣಾ ಪ್ರಶಸ್ತಿಯು ಹಿರಿಯ ಮದ್ದಳೆಗಾರರಾದ, ಗುರು ಹರಿನಾರಾಯಣ ಬೈಪಾಡಿತ್ತಾಯರಿಗೆ ನೀಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು