ನರಕ ಚತುರ್ದಶೀ ಕಥನ: ಭೂದೇವಿ ಪುತ್ರ ನರಕಾಸುರ ಪುಂಡನಾಗಿದ್ದೇಕೆ?


ದಕ್ಷಿಣ ಭಾರತದಲ್ಲಿ ಮೂರು ದಿನಗಳ ದೀಪಾವಳಿ ಹಬ್ಬದಲ್ಲಿ ನೀರು ತುಂಬಿಸುವ ಹಬ್ಬದ ಬಳಿಕ ನರಕ ಚತುರ್ದಶಿಯಂದು ಮಾಡುವ ಅಭ್ಯಂಗ ಸ್ನಾನಕ್ಕೆ ಮಹತ್ವವಿದೆ. ಈ ಕುರಿತು ವಿವರಣೆ ನೀಡಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ಮಹಾವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿಯರೆಂಬ ಇಬ್ಬರು ರಾಣಿಯರು. ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿ ನಂತರ ಭೂದೇವಿಯನ್ನು ಹಿಂಸಿಸಿದ ಹಿರಣ್ಯಾಕ್ಷನನ್ನು ಮಹಾವಿಷ್ಣುವು ವರಾಹಾವತಾರ ತಳೆದು ಬಂದು ವಧಿಸುತ್ತಾನೆ. ಅನಂತರ ವರಾಹ ಮತ್ತು ಭೂದೇವಿಯರ ಸಮಾಗಮದಿಂದ ಜನಿಸಿದವನೇ ನರಕಾಸುರ ಅಥವಾ ಭೌಮಾಸುರ. ದೇವಾಂಶ ಸಂಜನಿತನಾಗಿದ್ದರೂ ತಮೋಗುಣವು ವರ್ಧಿಸಿದ್ದ ಸಮಯದಲ್ಲಿ ಭೂದೇವಿಯು ವರಾಹನನ್ನು ಕೂಡಿದ್ದರಿಂದ ಆತ ರಕ್ಕಸನಾಗುತ್ತಾನೆ. ಹೀಗಾಗಿ ಭೂದೇವಿಯು ಆತನನ್ನು ಬಿಟ್ಟು ತೆರಳುತ್ತಾಳೆ. ತಂದೆತಾಯಿಯರ ಅಕ್ಕರೆ ಸಿಗದೇ ಅನಾಥನಾಗಿ ಬೆಳೆದವನಾದ್ದರಿಂದಲೋ ಏನೋ ನರಕಾಸುರನು ಚಿಕ್ಕಂದಿನಲ್ಲಿಯೇ ಪುಂಡನಾಗಿ ಬೆಳೆದು, ದೊಡ್ಡವನಾದ ಮೇಲೆ ಲೋಕಕ್ಕೇ ಕಂಟಕನಾಗುತ್ತಾನೆ.

ನರಕಾಸುರನು ಬೆಳೆದು ದೊಡ್ಡವನಾದ ಮೇಲೆ ಪ್ರಾಗ್ಜೋತಿಷಪುರದ ಅರಸನಾಗುತ್ತಾನೆ. ಆದರೂ ಕೂಡಾ ಆತನಿಗೆ ತನ್ನ ತಂದೆತಾಯಿಯರು ಯಾರೆಂಬುದು ತಿಳಿದಿರುವುದಿಲ್ಲ. ಹೀಗಾಗಿ, ಹೇಗಾದರೂ ಮಾಡಿ ತನ್ನ ತಂದೆ-ತಾಯಿಯರು ಯಾರೆಂಬುದನ್ನು ತಿಳಿದುಕೊಳ್ಳಬೇಕು, ಅವರನ್ನು ಒಮ್ಮೆಯಾದರೂ ಕಾಣಬೇಕು ಎಂಬ ತವಕದಲ್ಲಿದ್ದ ನರಕಾಸುರನು, ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ “ತಂದೆ-ತಾಯಿಯರಿಂದಲ್ಲದೇ ಅನ್ಯರಿಂದ ತನಗೆ ಮರಣ ಬರಬಾರದು” ಎಂಬ ವರವನ್ನು ಪಡೆಯುತ್ತಾನೆ. ವರದ ಬಲದಿಂದಾಗಿ ಭೂಲೋಕದ ಅರಸರನ್ನೆಲ್ಲ ಸೋಲಿಸಿ, ಹದಿನಾರು ಸಾವಿರ ಕನ್ಯೆಯರನ್ನು ತಂದು ಸೆರೆಯಲ್ಲಿರಿಸುತ್ತಾನೆ. ಸ್ವರ್ಗದ ಮೇಲೆ ದಾಳಿ ಮಾಡಿ ಇಂದ್ರನನ್ನು ಸೋಲಿಸಿ ಅಲ್ಲಿನ ಸುವಸ್ತುಗಳನ್ನೆಲ್ಲ ತನ್ನ ಪುರಕ್ಕೆ ಕೊಂಡೊಯ್ಯುತ್ತಾನೆ.

Yakshagana.in Updates  ಗಾಗಿ:  ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ

ಆ ಸಮಯದಲ್ಲಿ ಮಹಾವಿಷ್ಣುವು ಕೃಷ್ಣಾವತಾರದಲ್ಲಿ ಇದ್ದುದರಿಂದ, ದೇವತೆಗಳೆಲ್ಲ ಶ್ರೀಕೃಷ್ಣನಲ್ಲಿಗೆ ಬಂದು ದೂರುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಲ್ಲಲು ಹೊರಡುವಾಗ ಆತನ ಜೊತೆಯಲ್ಲಿ ಸತ್ಯಭಾಮೆಯೂ ಹೊರಡುತ್ತಾಳೆ. ಆಕೆಯೇ ಭೂದೇವಿಯಾಗಿರುವುದರಿಂದ ನರಕಾಸುರನನ್ನು ಆತ ಪಡೆದ ವರಕ್ಕೆ ಅನುಸಾರವಾಗಿ ಕೊಲ್ಲಲು ಅನುಕೂಲವಾಗುತ್ತದೆ ಎಂದು ಶ್ರೀಕೃಷ್ಣನು ಆಕೆಯನ್ನು ಸಂಗಡ ಕರೆದೊಯ್ಯುತ್ತಾನೆ. 

ಶ್ರೀಕೃಷ್ಣನಿಗೂ ನರಕಾಸುರನಿಗೂ ಯುದ್ಧವಾಗುತ್ತದೆ. ಸತ್ಯಭಾಮೆಯು ಯುದ್ಧದಲ್ಲಿ ಕೃಷ್ಣನಿಗೆ ನೆರವಾಗುತ್ತಾಳೆ. ಯುದ್ಧದಲ್ಲಿ ತನಗೆ ಸೋಲಾದಾಗ ನರಕಾಸುರನಿಗೆ ತಾನು ಪಡೆದ ವರದ ನೆನಪಾಗುತ್ತದೆ. ಆಗ ಅವನಿಗೆ ಇವರೇ ತನ್ನ ತಂದೆ-ತಾಯಿಗಳು ಎಂಬ ಅರಿವಾಗುತ್ತದೆ. ತಂದೆ-ತಾಯಿಯರ ಪಾದಕ್ಕೆ ಬಿದ್ದು ತನ್ನ ಹೆಸರು ಚಿರಸ್ಥಾಯಿಯಾಗುವಂತೆ ಮಾಡು ಹಾಗೂ ತನಗೆ ಮೋಕ್ಷವನ್ನು ಕರುಣಿಸು ಎಂದು ಬೇಡುತ್ತಾನೆ. ಅವನ ಕೋರಿಕೆಯನ್ನು ಮನ್ನಿಸಿದ ಶ್ರೀಕೃಷ್ಣನು “ತಥಾಸ್ತು” ಎನ್ನುತ್ತಾ ಆತನನ್ನು ಕೊಂದು ಆತನಿಗೆ ಮೋಕ್ಷವನ್ನು ಕರುಣಿಸುತ್ತಾನೆ.

ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನವೇ ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಾಗಿರುತ್ತದೆ. ಹೀಗಾಗಿ ಆ ದಿನವನ್ನು “ನರಕ ಚತುರ್ದಶಿ” ಎಂಬುದಾಗಿ ಆಚರಿಸುತ್ತೇವೆ. ಶ್ರೀಕೃಷ್ಣನು ಚತುರ್ದಶಿಯ ಬೆಳಗಿನ ಜಾವದಲ್ಲಿಯೇ ನರಕಾಸುರನನ್ನು ಕೊಂದು, ಬೆಳಗಾಗುವುದರೊಳಗೆ ಅಭ್ಯಂಗ ಸ್ನಾನವನ್ನು ಮಾಡಿ ತನ್ನ ಮೈಗೆ ಅಂಟಿದ್ದ ರಕ್ತವನ್ನೆಲ್ಲ ತೊಳೆದುಕೊಂಡಿದ್ದನು. ಹೀಗಾಗಿ ನರಕಾಸುರನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಲು ಇದೇ ಸೂಕ್ತ ಎಂದು ಆಲೋಚಿಸಿದ ಶ್ರೀಕೃಷ್ಣನು “ಈ ನರಕ ಚತುರ್ದಶಿಯ ದಿನದಂದು ಯಾರು ಅಭ್ಯಂಗ ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗದೇ ಇರಲಿ” ಎಂಬ ವರವನ್ನು ಪಾಲಿಸುತ್ತಾನೆ. ಈ ಪದ್ಧತಿಯನ್ನು ಅನುಸರಿಸದೇ ಇರುವವರು, ಪಾಪ ಮಾಡಿದವರು ಸತ್ತ ಮೇಲೆ ನರಕಕ್ಕೆ ಹೋಗುತ್ತಾರೆ ಎಂಬ ಪ್ರತೀತಿ ಇದೆ.

ಹೀಗಾಗಿ ಹಿಂದುಗಳೆಲ್ಲರೂ ನರಕ ಚತುರ್ದಶಿಯನ್ನು ಶ್ರದ್ಧೆಯಿಂದ ಆಚರಿಸುತ್ತಾರೆ. ತ್ರಯೋದಶಿಯ ದಿನವನ್ನು ‘ನೀರು ತುಂಬುವ ಹಬ್ಬ’ ಎನ್ನುತ್ತಾರೆ. ಹಳ್ಳಿಗಳಲ್ಲಿ ಬೇಸಾಯಗಾರರು ಅಂದು ಮನೆಯನ್ನು ಸ್ವಚ್ಛಗೊಳಿಸಿ, ಮನೆಯ ಮುಂದೆ ಸೆಗಣಿಯಿಂದ ನೆಲವನ್ನು ಸಾರಿಸಿ, ರಂಗೋಲಿ ಹಾಕುತ್ತಾರೆ. ಮನೆಯನ್ನು ಮಾವು ಮತ್ತು ಹೂವಿನ ತೋರಣಗಳಿಂದ ಶೃಂಗರಿಸುತ್ತಾರೆ. ಹಳ್ಳಿಗರ ಬಚ್ಚಲ ಮನೆಯಲ್ಲಿ ಕಟ್ಟಿಗೆ ಒಲೆಯಿಂದ ನೀರು ಕಾಯಿಸಲು ದೊಡ್ಡ ಹಂಡೆ(ಹರಿ)ಗಳಿರುತ್ತವೆ. ಆ ದೊಡ್ಡ ಹಂಡೆಗಳನ್ನು ಹುಣಿಸೆ ಹಣ್ಣಿನಲ್ಲಿ ತೊಳೆದು, ಅದಕ್ಕೆ ಶೇಡಿ ಮಣ್ಣಿನ ಮುದ್ರೆಗಳಿಂದ ಅಲಂಕಾರ ಮಾಡುವರು. ಕೆಲವರು ಒಲೆಯ ಬೂದಿಯಿಂದ ಅದಕ್ಕೆ ಬರೆ ಎಳೆಯುವರು. ಅದರಲ್ಲಿ ನೀರನ್ನು ತುಂಬಿ, ಹಂಡೆಯ ಕಂಠದ ಬಳಿ ಯಾವುದಾದರೂ ಹೂವಿನ ಮಾಲೆಯನ್ನು ಸುತ್ತುವರು. ನಂತರ ಅದಕ್ಕೆ ನೀರು ತುಂಬಿಸಿ ಇಡುವರು. 

ಮರುದಿನ ನರಕ ಚತುರ್ದಶಿ. ಆ ದಿನಕ್ಕೆ ‘ಬೂದ್ನೀರ್ (ಬೂದಿನೀರು) ಹಬ್ಬ’ ಅಥವಾ ಬಿಸಿನೀರು ಹಬ್ಬ ಎನ್ನುತ್ತಾರೆ. ಅಂದು ಚಂದ್ರೋದಯ ಕಾಲದಲ್ಲಿ ಅಂದರೆ ಬೆಳಿಗ್ಗೆ ಸೂರ್ಯ ಉದಯಿಸುವ ಮುನ್ನವೇ ಎದ್ದು, ಹಂಡೆಯಲ್ಲಿನ ನೀರನ್ನು ಕಾಯಿಸುತ್ತಾರೆ. ನಂತರ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ಅಭ್ಯಂಗ ಸ್ನಾನ ಅಂದರೆ ಸಂಪೂರ್ಣ ದೇಹಕ್ಕೆ ಎಳ್ಳೆಣ್ಣೆ ಅಥವಾ ತೆಂಗಿನೆಣ್ಣೆಯನ್ನು ಹಚ್ಚಿ, ತಿಕ್ಕಿ ಮಸಾಜ್ ಮಾಡಿ, ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದು ಎಂದರ್ಥ. ಸ್ನಾನದ ನಂತರ ದೇವರನ್ನು ಪೂಜಿಸುತ್ತಾರೆ. ನಂತರ ಅಮ್ಮ ಮಾಡಿ ಇಟ್ಟ ವಿಶೇಷವಾದ ಉದ್ದಿನ ದೋಸೆಗಳನ್ನು ಹೊಟ್ಟೆ ಬಿರಿಯುವಷ್ಟು ತಿನ್ನುತ್ತಾರೆ. ಅದಕ್ಕೆ ‘ಬೂದ್ನೀರ್ (ಬೂದಿನೀರು) ದೋಸೆ’ ಎಂದೇ ಕರೆಯುತ್ತಾರೆ. ಆಮೇಲೆ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ.

✒️ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು