ಸ್ವಂತ ದುಡಿಮೆಯಿಂದ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ: ಪಾತಾಳ ವೆಂಕಟರಮಣ ಭಟ್ಟರ ಐತಿಹಾಸಿಕ ಕ್ರಮ



ಯಕ್ಷಗಾನಕ್ಕೆ ಸ್ತ್ರೀ ವೇಷಗಳ ಪ್ರಾಧಾನ್ಯ ಏನು ಎಂಬುದನ್ನು ಲೋಕಮುಖಕ್ಕೆ ತೋರಿಸಿಕೊಟ್ಟ, ಯಕ್ಷಗಾನದ ತಪಸ್ವಿಯೇ ಆಗಿರುವ ಮತ್ತು ಸ್ತ್ರೀವೇಷಗಳಲ್ಲಿ ಮೆರೆದ ಪಾತಾಳ ವೆಂಕಟರಮಣ ಭಟ್ಟರು ಪ್ರಾತಃಸ್ಮರಣೀಯರು ಎಂಬುದರಲ್ಲಿ ಎರಡು ಮಾತಿಲ್ಲ. ಆ ಕಾಲದಲ್ಲಿ ಪಾತಾಳರ ಸ್ತ್ರೀ ವೇಷ ನೋಡಲೆಂದೇ ಬರುವವರಿಂದಾಗಿ ಅದೆಷ್ಟೋ ಯಕ್ಷಗಾನ ಪ್ರದರ್ಶನಗಳಲ್ಲಿ ಟೆಂಟುಗಳನ್ನು ಬಿಚ್ಚಬೇಕಾದ ಅನಿವಾರ್ಯತೆಯೂ ಸೃಷ್ಟಿಯಾಗಿದ್ದು, ಪಾತಾಳ ಅವರ ಪಾತ್ರಚಿತ್ರಣದ ವೈಖರಿಗೆ ಸಾಕ್ಷಿ.

ಪೌರಾಣಿಕ ಸ್ತ್ರೀ ಪಾತ್ರಗಳ ಚಿತ್ರಣ, ಲಾಲಿತ್ಯಪೂರ್ಣ, ಹದವರಿತ ನಾಟ್ಯ - ಇವೆಲ್ಲವೂ ತೆಂಕುತಿಟ್ಟು ಯಕ್ಷಗಾನಕ್ಕೆ ಪಾತಾಳರು ಕೊಟ್ಟ ಅಮೂಲ್ಯ ಕೊಡುಗೆ. ಇಂಥ ಮಹಾನ್ ಕಲಾವಿದರೊಬ್ಬರು, ತಾವು ಗಳಿಸಿದ ಆದಾಯವನ್ನು ಕಲಾವಿದರಿಗಾಗಿಯೇ ಮುಡಿಪಾಗಿಟ್ಟು, ಅವರಿಗೆ ಪ್ರಶಸ್ತಿ ರೂಪದಲ್ಲಿ ಪ್ರಸಾದ ರೂಪದಲ್ಲಿಯೂ ನೀಡಲು ನಿಶ್ಚಯಿಸಿರುವುದು ಯಕ್ಷಗಾನದ ಹೆಮ್ಮೆಯ ವಿಚಾರ.
ಪಾತಾಳ ವೆಂಕಟರಮಣ ಭಟ್ ಪ್ರಶಸ್ತಿಯನ್ನು 30 ಮಂದಿ ಕಲಾವಿದರಿಗೆ ತಲಾ 10 ಸಾವಿರ ರೂ. ಗೌರವಧನದೊಂದಿಗೆ ನೀಡಲಾಗುತ್ತಿರುವುದು ಯಕ್ಷಗಾನ ಚರಿತ್ರೆಯಲ್ಲಿಯೇ ಹೊಸ ಅಧ್ಯಾಯ. ಇದುವರೆಗೆ ಪ್ರತಿ ವರ್ಷ ಒಬ್ಬೊಬ್ಬ ಕಲಾವಿದರನ್ನು ಗುರುತಿಸಿ ಗೌರವಿಸುತ್ತಿದ್ದ ಪಾತಾಳರು, ಈಗ ಏಕಕಾಲಕ್ಕೆ 30 ಮಂದಿಗೆ 3 ಲಕ್ಷ ರೂ. ಮೊತ್ತದ ಪುರಸ್ಕಾರ ನೀಡುತ್ತಿದ್ದಾರೆ. ಇದು ಅನುಕರಣೀಯ, ಮಾದರಿ ಕ್ರಮ ಮತ್ತು ಐತಿಹಾಸಿಕವೂ ಕೂಡ.


ಯಕ್ಷಗಾನದಲ್ಲಿ ಸ್ತ್ರೀವೇಷಕ್ಕೆ ಮನ್ನಣೆಯೇ ಇಲ್ಲದ ಕಾಲದಲ್ಲಿ, ಶಿವರಾಮ ಕಾರಂತರ ಮಾತನ್ನು ಸವಾಲಾಗಿ ಸ್ವೀಕರಿಸಿ, ಸ್ತ್ರೀವೇಷಗಳಿಗೆ ಹೊಸತನ ನೀಡಿ, ಪುರುಷ ವೇಷಗಳೇಕೆ ಅಷ್ಟು ಮೆರೆಯುತ್ತವೆ ಎಂದೆಲ್ಲ ಅಧ್ಯಯನ ಮಾಡಿ, ಸ್ತ್ರೀವೇಷಕ್ಕೆ ಪ್ರಮುಖತೆ ದೊರಕಿಸುವಲ್ಲಿ ಶ್ರಮಿಸಿದವರು ಪಾತಾಳರು. ತಾವಾಗಿಯೇ ವಿವಿಧ ವೇಷಗಳ ಆಭರಣ ವಿನ್ಯಾಸಗಳನ್ನು ರೂಪಿಸಿದವರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದು ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಯಕ್ಷಗಾನಕ್ಕೂ ಅತ್ಯಂತ ಶ್ರೇಷ್ಠ ಕೊಡುಗೆ. ಈಗಿನ ಸ್ತ್ರೀವೇಷಗಳು ಮೆರೆಯುವಲ್ಲಿ ಇವರು ಹಾಕಿಕೊಟ್ಟ ದಾರಿಯ ಪ್ರಭಾವವೇ ಹೆಚ್ಚು. ಸ್ತ್ರೀವೇಷಗಳಿಗೆ ಬೇಕಾದ ತೋಳ್ಕಟ್ಟು, ಡಾಬು, ಕೈಕಟ್ಟು, ಕೊರಳ ಆಭರಣಗಳು, ಕಿರೀಟ (ಶಿರೋಭೂಷಣ), ಸೀರೆಯ ಬಳಕೆ - ಹೀಗೆ ಎಲ್ಲವನ್ನೂ ಮರುಸೃಷ್ಟಿಸಿದವರು ಪಾತಾಳರು.

ಸುಮಾರು 50 ವರ್ಷದಲ್ಲೇ ಪಾತಾಳರು ಯಕ್ಷಗಾನ ರಂಗದಿಂದ ಸ್ವಯಂನಿವೃತ್ತರಾಗಿದ್ದರು. ನಂತರ ಅವರು ಸ್ತ್ರೀವೇಷಗಳ ಅಧ್ಯಯನಕ್ಕೆ, ಹೊಸ ಶೋಧನೆಗೆ ತಮ್ಮ ಸಮಯವನ್ನು ಮೀಸಲಿರಿಸಿದ್ದರು. ಅವರಿಗೆ ಯಕ್ಷ ಶಾಂತಲಾ ಎಂಬ ಬಿರುದು ಅರ್ಹವಾಗಿಯೇ ದೊರಕಿದೆ ಎಂದರೆ ಅತಿಶಯೋಕ್ತಿಯಲ್ಲ.

ಸಣ್ಣಂದಿನಲ್ಲೇ ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ ಇದ್ದ ಪಾತಾಳರು, ಆರಂಭದಲ್ಲಿ ಮೃದಂಗಾಭ್ಯಾಸ ಮಾಡಿದ್ದರು. ನಂತರ ವೇಷಧಾರಿಯಾದವರು. ಸೌಕೂರು ಮೇಳದ ಉಳ್ತೂರು ಸೀತಾರಾಮ ಅವರಿಂದ ಬಡಗು ನಾಟ್ಯ ಕಲಿತಿದ್ದರು. ಮಾಣಂಗಾಯಿ ಕೃಷ್ಣ ಭಟ್ಟರು, ಪೆರುವೊಡಿ ನಾರಾಯಣ ಹಾಸ್ಯಗಾರರಿಂದ ತೆಂಕಿನ ನಾಟ್ಯವನ್ನು ಕಲಿತವರು. ಆದರೆ, ಬಡಗಿನ ನಾಟ್ಯವನ್ನು ತೆಂಕಿನಲ್ಲಿ ಬೆರೆಸದೇ ಇರುವ ಮೂಲಕ ಆಯಾ ತಿಟ್ಟುಗಳ ಪಾವಿತ್ರ್ಯವನ್ನು ಉಳಿಸಿದವರು ಅವರು.

ದಿ.ಕುರಿಯ ವಿಠಲ ಶಾಸ್ತ್ರಿಗಳ ವೇಷಗಳ ಅಭಿಮಾನಿಯಾಗಿದ್ದು, ಅವರ ಅಭಿನಯ ನೋಡುತ್ತಲೇ ತಮ್ಮನ್ನು ತಾವು ಯಕ್ಷಗಾನಾಭಿನಯದಲ್ಲಿ ಅರಳಿಸಿಕೊಂಡವರು ಪಾತಾಳರು. ಹುಬ್ಬಿನ ಚಲನೆ, ಕಣ್ಣುಗಳ ಚಲನೆ, ಭಾವಪೂರ್ಣ ಅಭಿನಯ ಇವುಗಳನ್ನೆಲ್ಲ ನೋಡಿ ನೋಡಿಯೇ, ತಮ್ಮ ಪಾತ್ರಪೋಷಣೆಗೆ ಬೇಕಾದವುಗಳನ್ನೆಲ್ಲ ಕಲಿತುಕೊಂಡವರು.

ಸ್ತ್ರೀವೇಷಗಳಿಗೆ ಚೆಂಡೆಯ ಬಳಕೆಯ ಬಗ್ಗೆ ಅವರ ಖಚಿತ ಮಾತು ಎಂದರೆ, ವೀರ, ರೌದ್ರ, ಭಯಾನಕ ಮತ್ತು ಬೀಭತ್ಸ ರಸಗಳ ಪದ್ಯಗಳಿಗೆ ಮಾತ್ರ ಸ್ತ್ರೀವೇಷಕ್ಕೆ ಚೆಂಡೆ ಬಳಸಬೇಕೆಂಬುದು.

ಪುತ್ತೂರು ತಾಲೂಕು ಬೈಪದವು ರಾಮ ಭಟ್‌ ಮತ್ತು ಹೇಮಾವತಿ ಅಮ್ಮ ಅವರ ಪುತ್ರನಾಗಿ 1933ರ ನವೆಂಬರ್ 16ರಂದು ಜನಿಸಿದ ಪಾತಾಳ ವೆಂಕಟರಮಣ ಭಟ್ಟರು ಓದಿದ್ದು ಕೇವಲ 8ನೇ ತರಗತಿವರೆಗೆ. ಮಾಣಂಗಾಯಿ ಕೃಷ್ಣ ಭಟ್ಟರಿಂದ ತೆಂಕು ತಿಟ್ಟು ನಾಟ್ಯಾಭ್ಯಾಸ, ಮಂಗಳೂರಿನ ವಿಠಲ್‌ ಮಾಸ್ಟರ್‌ ಅವರಿಂದ ಭರತನಾಟ್ಯ ಹಾಗೂ ಕೃಷ್ಣ ಅಯ್ಯರ್‌ ಅವರಿಂದ ನೃತ್ಯ ತರಬೇತಿ ಪಡೆದವರು. ತಮ್ಮ16ನೇ ವಯಸ್ಸಿಗೆ ಕಾಂಚನ ಮೇಳದಲ್ಲಿ ತಿರುಗಾಟ ಆರಂಭಿಸಿ ಮೂಲ್ಕಿ, ಸೌಕೂರು, ಸುರತ್ಕಲ್‌, ಧರ್ಮಸ್ಥಳ ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ್ದಾರೆ. 50ರಿಂದ 70ರ ದಶಕದವರೆಗೂ ರಂಗವಾಳಿದ ಅವರು 1981ರಲ್ಲಿ ಯಕ್ಷಗಾನದ ವ್ಯವಸಾಯಿ ರಂಗದಿಂದ ನಿವೃತ್ತಿಯಾದರು.

ಊರ್ವಶಿ, ಮೇನಕೆ, ದ್ರೌಪದಿ, ಮೋಹಿನಿ, ಪ್ರಮೀಳೆ ಮುಂತಾದ ಸ್ತ್ರೀಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಅದೇ ರೀತಿ, ಧರ್ಮರಾಯ, ಶ್ರೀರಾಮ, ವಿಷ್ಣು, ಅತಿಕಾಯ ಮುಂತಾದ ಪುರುಷ ಪಾತ್ರಗಳನ್ನೂ ಅವರು ನಿರ್ವಹಿಸಿ ಸೈ ಅನ್ನಿಸಿಕೊಂಡಿದ್ದಾರೆ. 18 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಸ್ತ್ರೀಪಾತ್ರಧಾರಿಯಾಗಿ ದುಡಿದವರು ಅವರು. ಮೂರು ದಶಕಕ್ಕೂ ಹೆಚ್ಚು ಕಾಲ ವ್ಯವಸಾಯ ಮಾಡಿ, ಬೇಡಿಕೆಯಲ್ಲಿದ್ದಾಗಲೇ ನಿವೃತ್ತಿ ತೆಗೆದುಕೊಂಡ ಪಾತಾಳರು, ಅಧ್ಯಯನಶೀಲರಾಗಿದ್ದಾರೆ. ಸ್ತ್ರೀಪಾತ್ರದ ಕುರಿತು ಸಂಶೋಧನೆಯನ್ನೇ ಮಾಡಿದ್ದಾರೆ. ಹಲವು ಕಡೆ ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಸ್ತ್ರೀವೇಷ, ಬಣ್ಣಗಾರಿಕೆ, ಆಭರಣಗಳ ಕುರಿತು ಆಳವಾದ ಚಿಂತನೆ ನಡೆಸಿ, ಸ್ತ್ರೀವೇಷವನ್ನು ಪುರುಷವೇಷಕ್ಕೆ ಸಂವಾದಿಯಾಗಿ ರೂಪಿಸಿದವರು ಎಂದರೆ ತಪ್ಪಾಗಲಾರದು.

ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳ ಕುರಿತಾಗಿ ಶಿವರಾಮ ಕಾರಂತರ ಮಾತಿನ್ನೇ ಸವಾಲಾಗಿ ಸ್ವೀಕರಿಸಿ, ಡಿವಿಜಿಯವರ "ಅಂತಃಪುರ ಗೀತೆ' ಪುಸ್ತಕವನ್ನು ಅಧ್ಯಯನ ಮಾಡಿ ಅದರಿಂದ ಯಕ್ಷಗಾನದ ಸ್ತ್ರೀಪಾತ್ರಕ್ಕೆ ಬೇಕಾದ ಅಂಶಗಳನ್ನೂ, ಬೇಲೂರು ಶಿಲಾ ಬಾಲಿಕೆ ಶಿಲ್ಪಗಳ ನಿಲುವು, ಆಹಾರ್ಯಗಳನ್ನೂ ಅಧ್ಯಯನ ಮಾಡಿ ಯಕ್ಷಗಾನ ಸ್ತ್ರೀವೇಷಕ್ಕೆ ಅಳವಡಿಸಿದವರು ಅವರು.

ಪುತ್ತೂರು ತಾಲೂಕಿನ ಪಾತಾಳದವರಾದ ವೆಂಕಟರಮಣ ಭಟ್ಟರಿಗೆ ಅರ್ಹವಾಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಜೊತೆಗೆ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಠಾನ ಪ್ರಶಸ್ತಿ, ಫಲಿಮಾರು ಮಠದ ವಿದ್ಯಾಮಾನ್ಯ ಪ್ರಶಸ್ತಿ ಮತ್ತು ಇತರ ಗೌರವಗಳು ದೊರೆತಿದ್ದು, ಅವರಿಗೆ 75 ತುಂಬಿದಾಗ "ಯಕ್ಷ ಶಾಂತಲಾ" ಅಭಿನಂದನ ಗ್ರಂಥವನ್ನು ಮುಳಿಯ ಶಂಕರ ಭಟ್‌ ಮತ್ತು ನಾ. ಕಾರಂತ ಪೆರಾಜೆ ಸಂಪಾದಕತ್ವದಲ್ಲಿ ಅರ್ಪಿಸಲಾಗಿದೆ. ಇದು ಸಂಗ್ರಹಯೋಗ್ಯ ಪುಸ್ತಕ.

ಅವರಿಗೆ ಇಬ್ಬರು ಪುತ್ರರಿದ್ದು, ಅಂಬಾ ಪ್ರಸಾದ ಪಾತಾಳರು ಯಶಸ್ವೀ ಸ್ತ್ರೀ ಪಾತ್ರಧಾರಿಯಾಗಿ ಹೆಸರು ಮಾಡಿದ್ದಾರೆ. ಪಾತಾಳರಿಗೆ ನಾಲ್ವರು ಪುತ್ರಿಯರೂ ಇದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು