ಉಡುಪಿ ಯಕ್ಷಗಾನ ಸಮ್ಮೇಳನ | 75 ಕಲಾವಿದರಿಗೆ ಸನ್ಮಾನ, 30 ತಂಡಗಳಿಂದ ಪ್ರದರ್ಶನ, ಗೋಷ್ಠಿ

ಬೆಂಗಳೂರು: ಉಡುಪಿಯ ಕುಂಜಿಬೆಟ್ಟುವಿನ ಎಎಲ್‌ಎಸ್‌ ರಾವ್‌ ಕ್ರೀಡಾಂಗಣದಲ್ಲಿ ಫೆ.11ರಂದು ನಡೆಯುವ ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. 10 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. 75 ಮಂದಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಗುವುದು. 200 ಕಲಾವಿದರ ಭಾವಚಿತ್ರ ಹಾಗೂ ಕಿರುಪರಿಚಯದ ಪ್ರದರ್ಶನ ಇರಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ರಘುಪತಿ ಭಟ್‌ ಹೇಳಿದರು.

‘ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಉಡುಪಿಯಲ್ಲಿ ಫೆ.11 ಹಾಗೂ 12ರಂದು ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಡಾ.ಎಂ.ಪ್ರಭಾಕರ ಜೋಷಿ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
‘ಉಡುಪಿಯಲ್ಲಿ 2006ರಿಂದಲೂ ಯಕ್ಷ ಶಿಕ್ಷಣ ಟ್ರಸ್ಟ್‌ ಅಡಿ 41 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಲಾಗುತ್ತಿದೆ. ಪ್ರತಿವರ್ಷ 1,500 ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅವರೆಲ್ಲರೂ ಈ ಸಮ್ಮೇಳನದಲ್ಲಿ ಪ್ರದರ್ಶನ ನೀಡಲಿದ್ದಾರೆ’ ಎಂದರು.

‘ಪಠ್ಯಕ್ರಮ ರೂಪಿಸಿ, ಯಕ್ಷಗಾನ ಶಿಕ್ಷಣ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಗುವುದು. ಯಕ್ಷಗಾನವು ಬರೀ ಕರಾವಳಿ ಜಿಲ್ಲೆಗಳಿಗೆ ಸೀಮಿತವಾದ ಕಲೆ ಅಲ್ಲ. ಚಿಕ್ಕಮಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲೂ ವ್ಯಾಪಿಸಿದೆ’ ಎಂದು ಹೇಳಿದರು.

ಆರು ಗೋಷ್ಠಿಗಳು
‘ಸಮ್ಮೇಳನಕ್ಕೆ ದುಬೈ, ಅಮೆರಿಕ ಹಾಗೂ ಮುಂಬೈನಿಂದಲೂ ಯಕ್ಷಗಾನ ಆಸಕ್ತರು ಬರುತ್ತಿದ್ದಾರೆ’ ಎಂದು ಕಾರ್ಯಾಧ್ಯಕ್ಷ ಡಾ.ಬಿ.ಎಲ್‌.ಹೆಗಡೆ ತಿಳಿಸಿದರು.

‘ಯಕ್ಷಗಾನದ ಪಾರಂಪರಿಕ ಹಾಗೂ ಪ್ರಾದೇಶಿಕ ಪಠ್ಯಗಳು’, ‘ಆಧುನಿಕ ಶಿಕ್ಷಣ ಮಾದರಿಯ ಪಠ್ಯದ ಪ್ರಸ್ತುತತೆ’, ‘ಯಕ್ಷಗಾನ ಮತ್ತು ಶಾ‌ಸ್ತ್ರೀಯತೆಯ ಇತಿಮಿತಿಗಳು’, ‘ಕನ್ನಡ ಶಾಸ್ತ್ರೀಯ ಭಾಷೆಗೆ ಯಕ್ಷಗಾನ ಕೊಡುಗೆ’, ‘ಯಕ್ಷಗಾನ ಪ್ರಸಂಗ ಪಠ್ಯಗಳಲ್ಲಿ ಕಾವ್ಯ ಸೌಂದರ್ಯ’, ‘ಯಕ್ಷಗಾನ ಮತ್ತು ಕನ್ನಡ ಆಶು ಪರಂಪರೆಯ ಸ್ವರೂಪ’ ಕುರಿತು ತಜ್ಞರು ವಿಷಯ ಮಂಡಿಸಲಿದ್ದಾರೆ. ಎರಡು ದಿನವೂ ಯಕ್ಷಗಾನ ಪ್ರದರ್ಶನ ನಡೆಯಲಿದೆ’ ಎಂದು ಮಾಹಿತಿ ನೀಡಿದರು. ತೆಂಕು, ಬಡಗು, ಮೂಡಲಪಾಯ, ಬಡಾಬಡಗು, ಮಹಿಳಾ ಯಕ್ಷಗಾನದ ಬಗ್ಗೆ ಒಟ್ಟೂ ಆರು ಗೋಷ್ಠಿಗಳು ನಡೆಯಲಿವೆ.

‘ಸಮ್ಮೇಳನದಲ್ಲಿ ಮುಂಬೈ, ದುಬೈನಿಂದ ಬರುವ ತಂಡಗಳು ಪಾಲ್ಗೊಳ್ಳುತ್ತಿವೆ. ಉಡುಪಿ ಶಾಸಕ ರಘುಪತಿ ಭಟ್, ಯಕ್ಷಗಾನ ಮೇಳಗಳ ಯಜಮಾನರಾದ ಉಡುಪಿಯ ಕಿಶನ್ ಹೆಗ್ಡೆ ಅವರು ಸಮ್ಮೇಳನ ಸಂಘಟನೆಯ ನೇತೃತ್ವ ವಹಿಸುತ್ತಿದ್ದಾರೆ. ಸುಮಾರು 30 ವಿವಿಧ ಯಕ್ಷಗಾನ ತಂಡಗಳು ಪಾಲ್ಗೊಳ್ಳಲಿವೆ. 200 ಹಿರಿಯ ಕಲಾವಿದರ ಭಾವಚಿತ್ರ ಪ್ರದರ್ಶಿಸಲಾಗುತ್ತಿದೆ. ಯಕ್ಷಗಾನ ವೇಷ-ಭೂಷಣ, ಕಸೆಸೀರೆ, ಗೆಜ್ಜೆ ಪ್ರದರ್ಶನ ಮಳಿಗೆ, ಆಸಕ್ತ ಸಾರ್ವಜನಿಕರ ಮುಖಕ್ಕೆ ಯಕ್ಷಗಾನ ಬಣ್ಣ ಹಚ್ಚಿ ಭಾವಚಿತ್ರ ತೆಗೆಸಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನ ಪ್ರಧಾನ ವೇದಿಕೆಗೆ ಶಂಕರ ನಾರಾಯಣ ಸಾಮಗ, ಉಳಿದ ವೇದಿಕೆಗಳಿಗೆ ಕೆರೆಮನೆ ಶಿವರಾಮ ಹೆಗಡೆ ಹಾಗೂ ಅಳಿಕೆ ರಾಮ ರೈ ಅವರ ಹೆಸರು ಇಡಲಾಗಿದೆ’ ಎಂದರು.

ಯಕ್ಷಗಾನ ಮೇಳಗಳಲ್ಲಿ ಟೆಂಟ್ ಕಟ್ಟುವವರು, ಬಣ್ಣ ಹಚ್ಚುವವರು, ವಾದ್ಯ ವೃಂದದವರು, ವಸ್ತ್ರಾಲಂಕಾರ ಹಾಗೂ ಅಡುಗೆ ಮಾಡುವ ಸುಮಾರು 75 ಜನರನ್ನು ಗುರುತಿಸಿ ಗೌರವಿಸಲಾಗುವುದು. ಒಟ್ಟೂ 1,200 ಕಲಾವಿದರು ಪಾಲ್ಗೊಳಲಿದ್ದಾರೆ. ಅವರಲ್ಲಿ 200 ಜನರನ್ನು ಗೌರವಿಸಲಾಗುವುದು. ಸರ್ಕಾರ ನಡೆಸುವ ಮೊದಲ ಯಕ್ಷಗಾನ ಸಮ್ಮೇಳನ ಇದಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು