- ಪ್ರೊ.ಎಂ.ಎಲ್.ಸಾಮಗರಿಗೆ ಪಟ್ಲ ಪ್ರಶಸ್ತಿ 2023
- ವಿದ್ಯಾರ್ಥಿಗಳಿಗೆ ಯಕ್ಷಗಾನ ಸ್ಫರ್ಧೆ
- ಕಲಾವಿದರಿಗೆ ಕಲಾಗೌರವ, ಧನ ಸಹಾಯ
- ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
- ನಟರಾದ ಕಿಚ್ಚ ಸುದೀಪ್, ರಿಷಭ್ ಶೆಟ್ಟಿ ಭಾಗಿ
- ಭರ್ಜರಿ ಯಕ್ಷಗಾನ ರಸದೂಟ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಮೇ 27ರಂದು ಶನಿವಾರ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ, ಮೇ 28ರಂದು 'ಯಕ್ಷಧ್ರುವ ಪಟ್ಲ ಸಂಭ್ರಮ 2023' ನಗರದ ಹೊರವಲಯದಲ್ಲಿರುವ ಅಡ್ಯಾರ್ನ ಅಡ್ಯಾರ್ ಗಾರ್ಡನ್ನಲ್ಲಿ ನಡೆಯಲಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ಮೇ 27ರ ಬೆಳಗ್ಗೆ 9ಕ್ಕೆ ಆರಂಭಗೊಳ್ಳಲಿದೆ. ಮೇ 28ರಂದು ಟ್ರಸ್ಟ್ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅವರು ಯಕ್ಷಧ್ರುವ ಪಟ್ಲ ಸಂಭ್ರಮದ ಅಧ್ಯಕ್ಷತೆ ವಹಿಸಲಿದ್ದು ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಬೆಳಿಗ್ಗೆ 8ರಿಂದ ಚೌಕಿ ಪೂಜೆ, ನಂತರ ಅಡ್ಯಾರ್ ಕಟ್ಟೆಯಿಂದ ಮೆರವಣಿಗೆ ನಡೆಯಲಿದೆ. 9.30ಕ್ಕೆ ಉದ್ಘಾಟನೆ ನೆರವೇರಲಿದೆ ಎಂದರು.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ.
ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಬಾರ್ಕೂರು ಸಂಸ್ಥಾನಂನ ಶ್ರೀ ವಿಶ್ವಸಂತೋಷ ಭಾರತಿ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ, ಪಾವಂಜೆ ಕ್ಷೇತ್ರದ ಧರ್ಮದರ್ಶಿ ಯಾಜಿ ನಿರಂಜನ ಭಟ್ ಆಶೀರ್ವಚನ ನೀಡಲಿದ್ದಾರೆ. ಸಿಎ ದಿವಾಕರ್ ರಾವ್ ಕಟೀಲು ಉದ್ಘಾಟಿಸಲಿದ್ದಾರೆ. ಟ್ರಸ್ಟ್ನ ಪ್ರಧಾನ ಸಂಚಾಲಕ ಐಕಳ ಹರೀಶ್ ಶೆಟ್ಟಿ ಮತ್ತು ಶಶಿಧರ ಶೆಟ್ಟಿ ಬರೋಡಾ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ ಇರಲಿದೆ.
ಮೇ 28ರಂದು ಬೆಳಗ್ಗೆ 11ರಿಂದ ಯಕ್ಷಗಾನ ಸಪ್ತಸ್ವರ- ಯಕ್ಷಗಾನ ಹಾಡುಗಳ ಗಾನವೈಭವ ನಡೆಯಲಿದೆ. ಇದರಲ್ಲಿ ಕಲಾವಿದರಾದ ಪುತ್ತಿಗೆ, ಅಮ್ಮಣ್ಣಾಯ, ರಾಘವೇಂದ್ರ ಮಯ್ಯ, ಬಲಿಪ, ಕನ್ನಡಿಕಟ್ಟೆ, ಜನ್ಸಾಲೆ, ಕಕ್ಕೆಪದವು, ಉಪಾಧ್ಯಾಯ, ಬೊಳಿಂಜಡ್ಕ, ಪದ್ಯಾಣ, ಸುನಿಲ್, ಸುಜನ್ ಹಾಲಾಡಿ ಭಾಗವಹಿಸಲಿದ್ದು, ಉಜಿರೆ ಅಶೋಕ್ ಭಟ್ ನಿರೂಪಿಸಲಿದ್ದಾರೆ.
ಮಧ್ಯಾಹ್ನ 2.30ರಿಂದ ತಾಳಮದ್ದಲೆ, ಸಂಜೆ 4ರಿಂದ ಮಹಿಳಾ ಯಕ್ಷಗಾನ ನಡೆಯಲಿದೆ. ರಾತ್ರಿ 8ರಿಂದ ‘ಯಕ್ಷಧ್ರುವ ಕಲಾ ವೈಭವ’ ನಡೆಯಲಿದೆ. ಸಮಾರಂಭದಲ್ಲಿ ಕಿಚ್ಚ ಸುದೀಪ್, ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.
ಪ್ರೊಫೆಸರ್ ಎಂ.ಎಲ್ ಸಾಮಗ ಅವರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉದ್ಯಮಿ ಪ್ರಕಾಶ್ ಕೆ ಶೆಟ್ಟಿ ಮತ್ತು ಆಶಾ ಪ್ರಕಾಶ್ ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಲಿದೆ.
ಲೀಲಾವತಿ ಬೈಪಾಡಿತ್ತಾಯ, ಶಂಭುಶರ್ಮ ಮತ್ತು ಇತರರಿಗೆ ಕಲಾ ಗೌರವ ಪ್ರಶಸ್ತಿ
ಈ ಸಂದರ್ಭದಲ್ಲಿ, ಕುಡುಪು ನರಸಿಂಹ ತಂತ್ರಿ (ವೈದಿಕ), ಮನೋಹರ್ ಪ್ರಸಾದ್ (ಮಾಧ್ಯಮ), ಬ್ರಿಗೇಡಿಯರ್ ಐ.ಎನ್ ರೈ (ಭಾರತೀಯ ಸೇನೆ), ಕಲಾರಂಗ ಉಡುಪಿ (ಕಲಾ ಸಂಘಟನೆ), ಕನ್ನಡ ಸಂಘ ಬಹೈರೆನ್ (ವಿದೇಶ), ವಿದ್ವಾನ್ ಯೋಗೀಶ್ ಶರ್ಮ ಬಳ್ಳಪದವು (ಶಾಸ್ತ್ರೀಯ ಸಂಗೀತ), ಮಹಾಬಲ ಶೆಟ್ಟಿ (ಹರಿಕಥೆ), ತಮ್ಮಲಕ್ಷ್ಮಣ (ರಂಗಭೂಮಿ), ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ (ಭರತನಾಟ್ಯ), ಭಾಸ್ಕರ ಕೋಟ್ಯಾನ್ ಕೊಳಕೆ ಇರ್ವತ್ತೂರು (ಕಂಬಳ), ಕೊಳ್ತಿಗೆ ನಾರಾಯಣ ಗೌಡ, ಡಿ.ಮನೋಹರ್ ಕುಮಾರ್, ಮಹಾಬಲ ದೇವಾಡಿಗ ಕಮಲಶಿಲೆ, ರಘುರಾಮ ಮಡಿವಾಳ ಮಂದಾರ್ತಿ (ಯಕ್ಷಗಾನ), ಶಂಭುಶರ್ಮ ವಿಟ್ಲ, ಶಿವರಾಮ ಪಣಂಬೂರು (ಹವ್ಯಾಸಿ), ಲೀಲಾವತಿ ಬೈಪಾಡಿತ್ತಾಯ (ಮಹಿಳೆ), ಬಾಚಕೆರೆ ದೇಜಪ್ಪ ಪರವ (ದೈವಾರಾದನೆ), ಕುದ್ರೋಳಿ ಗಣೇಶ್ (ಜಾದೂ), ದಯಾನಂದ್, ದಯಾ ಆಟ್ಸ್೯ (ಚಿತ್ರಕಲೆ), ಶಿವಪ್ಪ ಆಚಾರ್ಯ ಪಟ್ಲ (ಭಜನೆ) ಅವರಿಗೆ ಕಲಾ ಗೌರವ ಪ್ರಶಸ್ತಿ ನೀಡಲಾಗುವುದು ಎಂದು ಸತೀಶ್ ಶೆಟ್ಟಿ ತಿಳಿಸಿದರು.
ದೈವ ನರ್ತಕ ಕಾಂತು ಅಜಿಲ ಎಡಮೊಗರು, ಕಟೀಲು ಮೇಳದ ಕಲಾವಿದ ಗುರುವಪ್ಪ ಬಾಯಾರ್ ಮತ್ತು ಜಗದೀಶ ನಲ್ಕ ಕುಟುಂಬಕ್ಕೆ ಮರಣೋತ್ತರ ಗೌರವವಾಗಿ ತಲಾ ₹1 ಲಕ್ಷ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಫೌಂಡೇಷನ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಉಪಾಧ್ಯಕ್ಷ ಮನು ರಾವ್, ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ ಇದ್ದರು.
Tags:
ಸುದ್ದಿ