![]() |
ಕಾಸರಗೋಡು: ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ಯಕ್ಷಗಾನ ತಾಳಮದ್ದಲೆ- ಭಜನೆ -ಪ್ರವಚನ ಕಾರ್ಯಕ್ರಮ ಸರಣಿಗೆ ತೀರ್ಥಹಳ್ಳಿ ಹಾದಿಗಲ್ಲು ಶ್ರೀ ಅಭಯನೃಸಿಂಹ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಲಕ್ಷ್ಮೀನಾರಾಯಣ ಹಾದಿಗಲ್ಲು ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಸರಗೋಡು ಪ್ರದೇಶವು ಕರ್ನಾಟಕದ ಅವಿಭಾಜ್ಯ ಅಂಗ. ಆದರೆ ಯಾವುದೋ ಕಾರಣದಿಂದ ಕೇರಳ ಪಾಲಾಯಿತು. ಆದರೂ ನಮ್ಮ ಭಾವನೆಗಳಲ್ಲಿ ಕಾಸರಗೋಡು ನಮ್ಮದೇ, ಕರ್ನಾಟಕದ್ದೇ ಎಂಬುದಾಗಿ. ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆ ಮರೆಯಲಸದಳ ಎಂದರು.
ಕೈಯಾರರಂತಹ ಕವಿ ಶ್ರೇಷ್ಠರು ಮೆರೆದ ನಾಡು ಕಾಸರಗೋಡು. ಯಾವುದೇ ವಿಚಾರಕ್ಕೂ ಹಿನ್ನಡೆ ಎಂಬುದೇ ಇಲ್ಲ. ಯಾಕೆಂದರೆ ಸಿರಿಬಾಗಿಲು ಪ್ರತಿಷ್ಠಾನದಂತಹ ಸಾಂಸ್ಕೃತಿಕ ಕನ್ನಡಪರ ಸಂಸ್ಥೆಗಳು ಹತ್ತು ಹಲವು ಚಟುವಟಿಕೆಗಳ ಮೂಲಕ ಸಂಸ್ಕೃತಿಯನ್ನು ಮೆರೆಸುವಂತೆ ಮಾಡುತ್ತಿದೆ ಎಂದ ಅವರು, ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯರ ನೇತೃತ್ವದ ಪ್ರತಿಷ್ಠಾನ ಈಗಾಗಲೇ ವ್ಯಾಪಕ ಹೆಸರು ಪಡೆದಿದೆ. ಇದು ನಮಗೆಲ್ಲ ಹೆಮ್ಮೆಯ ವಿಚಾರ ಎಂದರು.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ.
ಯಕ್ಷಗಾನದ ದಿಗ್ಗಜ ಮೇರು ಕಲಾವಿದ ದಿವಂಗತ ಲಯಬ್ರಹ್ಮ ಬಿರುದಾಂಕಿತ ಭೀಮ ಭಟ್ಟರ ಸುಪುತ್ರ, ಹುಬ್ಬಳ್ಳಿಯ ಅನನ್ಯ ಫೀಡ್ಸ್ ಮಾಲೀಕರಾದ ದಿವಾಣ ಗೋವಿಂದ ಭಟ್ ಮುಖ್ಯ ಅತಿಥಿಯಾಗಿದ್ದರು ಮಾತನಾಡುತ್ತಾ, ಹಿರಿಯರು ಹಿಂದಿನ ಕಾಲದಲ್ಲಿ ಕಷ್ಟದಿಂದ ಉಳಿಸಿ ಬೆಳೆಸಿದ ಪವಿತ್ರ ಕಲೆ ಯಕ್ಷಗಾನ. ಅದನ್ನು ಉಳಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು ಎಂದರು. ಹಿರಿಯರಾದ ದಿವಾಣ ಭೀಮಭಟ್ಟರ ಮಾರ್ಗದರ್ಶನದಲ್ಲಿ ಬೆಳೆದು ಬಂದ ನಾನು ಉದ್ಯಮಿಯಾಗಿದ್ದರೂ ಯಕ್ಷಗಾನಕ್ಕಾಗಿ, ಕಲಾವಿದರಿಗಾಗಿ ಸದಾ ಸಿದ್ಧಹಸ್ತನಾಗಿದ್ದೇನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಮುಖ್ಯಸ್ಥ ತಲ್ಲೂರು ಶಿವರಾಮ ಶೆಟ್ಟಿ ಅವರು ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸಿದರು. ಇದೊಂದು ಅಧ್ಯಯನಯೋಗ್ಯ ಭವನ. ಮ್ಯೂಸಿಯಂ ಅಂತೂ ಅತ್ಯದ್ಭುತವಾಗಿದೆ. ಕಾಸರಗೋಡಿನಲ್ಲಿ ಇಂತಹ ಪ್ರಯತ್ನಗಳಿಂದ ಸಿರಿಬಾಗಿಲು ಪ್ರತಿಷ್ಠಾನದ ಯೋಜನೆ ಚಾರಿತ್ರಿಕವಾಗಿರಲಿ ಎಂದರು.
ಶ್ರುತಕೀರ್ತಿರಾಜ್ ಉಜಿರೆ ಅವರು ಕಾರ್ಯಕ್ರಮ ನಿರೂಪಿಸಿದರು ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ ಉಪಸ್ಥಿತರಿದ್ದರು. ಆ ಬಳಿಕ ಪ್ರಸಿದ್ಧ ಕಲಾವಿದರಿಂದ ಪಾರ್ತಿಸುಬ್ಬ ವಿರಚಿತ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ದಲೆ ಜರುಗಿತು. ಹಿಮ್ಮೇಳದಲ್ಲಿ ರಮೇಶ್ ಭಟ್ ಪುತ್ತೂರು, ಮುರಾರಿ ಕಡಂಬಳಿತ್ತಾಯ, ಲಕ್ಮೀಶ ಬೆಂಗ್ರೋಡಿ ಸಹಕರಿಸಿದರೆ, ದಶರಥನಾಗಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಕೈಕೇಯಿಯಾಗಿ ಹರೀಶ್ ಬಳಂತಿಮೊಗರು, ಮಂಥರೆಯಾಗಿ ಬಾಲಕೃಷ್ಣ ಮಣಿಯಾಣಿ ಮವ್ವಾರು, ಶ್ರೀರಾಮನಾಗಿ ಶ್ರುತಕೀರ್ತಿರಾಜ್, ಲಕ್ಷ್ಮಣನಾಗಿ ಲಕ್ಷ್ಮಣ ಕುಮಾರ್ ಮರಕಡ ಭಾಗವಹಿಸಿದರು.
ಇದಕ್ಕೆ ಮೊದಲು ಕೆನರಾ ಬ್ಯಾಂಕ್ನವರು ಪ್ರತಿಷ್ಠಾನಕ್ಕೆ ಕೊಡುಗೆಯಾಗಿ ನೀಡಿದ ಮಹೀಂದ್ರಾ ಕಂಪೆನಿಯ ಜನರೇಟರ್ಗೆ ಕಂಪೆನಿಯ ಸದಸ್ಯರ ಉಪಸ್ಥಿತಿಯಲ್ಲಿ ಮಧುಕರ ಭಾಗವತರು ಚಾಲನೆ ನೀಡಿದರು. ಸಂಜೆ 7 ರಿಂದ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘ ಬೆದ್ರಡ್ಕ ಇವರಿಂದ ಭಜನೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಿತು.
Tags:
ಸುದ್ದಿ