ಅಂಡಾಲ, ಕೊಳ್ತಿಗೆ, ರಾಘವದಾಸ್, ಕೋಡಿ, ಕರ್ಗಲ್ಲು, ಅಡ್ಕ, ಮಣಿಯಾಣಿ, ಕುಪ್ಪೆಪದವು, ಎಳ್ಳಂಪಳ್ಳಿ ಸಹಿತ ಯಕ್ಷಗಾನ ತೆಂಕು, ಬಡಗು, ಮೂಡಲಪಾಯ ಕಲಾವಿದರಿಗೆ ಅಕಾಡೆಮಿ ಪುರಸ್ಕಾರ
ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ತೆಂಕು ತಿಟ್ಟು ಯಕ್ಷಗಾನ ರಂಗದ ಹಿರಿಯ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ.
ಹಲವು ಮೇಳಗಳಲ್ಲಿ ತಿರುಗಾಟ ನಡೆಸಿ, ಬಳಿಕ ಹಿಮ್ಮೇಳ ಗುರುಗಳಾಗಿ ಹಲವಾರು ಶಿಷ್ಯರನ್ನು ಯಕ್ಷಗಾನ ರಂಗಕ್ಕೆ ಕೊಡುಗೆಯಾಗಿ ನೀಡಿದ್ದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ, ಇತ್ತೀಚೆಗಷ್ಟೇ ತೆಂಕು ತಿಟ್ಟಿನ ಮತ್ತೊಬ್ಬ ಗುರುಶ್ರೇಷ್ಠ ದಂಪತಿ ಹರಿನಾರಾಯಣ ಬೈಪಾಡಿತ್ತಾಯ - ಲೀಲಾವತಿ ಬೈಪಾಡಿತ್ತಾಯ ಹೆಸರಿನಲ್ಲಿ ಡಿಜಿ ಯಕ್ಷ ಫೌಂಡೇಶನ್ ಕೊಡಮಾಡುವ 'ಶ್ರೀ ಹರಿಲೀಲಾ ಯಕ್ಷನಾದ' ಪ್ರಶಸ್ತಿ 2024 ನೀಡಿ ಗೌರವಿಸಲಾಗಿತ್ತು.
ತೆಂಕು ತಿಟ್ಟು ಯಕ್ಷಗಾನ ರಂಗದ ಹಿರಿಯ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಸುಬ್ರಾಯ ಹೊಳ್ಳ ಕಾಸರಗೋಡು, ಪ್ರಸಾಧನ ಕಲಾವಿದ ಬಜ್ಪೆ ರಾಘವದಾಸ್, ಬಡಗುತಿಟ್ಟು ಯಕ್ಷಗಾನ ರಂಗದ ಕೋಡಿ ವಿಶ್ವನಾಥ ಗಾಣಿಗ ಹಾಗೂ ಮೂಡಲಪಾಯ ಯಕ್ಷಗಾನಕ್ಕೆ ಸಂಬಂಧಿಸಿ ತುಮಕೂರು ಅರಳಗುಪ್ಪೆಯ ಕಾಂತರಾಜು ಅವರು 2024ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
2024ನೇ ಸಾಲಿನ ವಾರ್ಷಿಕ ಯಕ್ಷ ಸಿರಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ:
- ಕಾಸರಗೋಡಿನ ಹಿರಿಯ ಅರ್ಥಧಾರಿ ಅಡ್ಕ ಗೋಪಾಲಕೃಷ್ಣ ಭಟ್
- ತೆಂಕುತಿಟ್ಟು ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ
- ತೆಂಕುತಿಟ್ಟು ಬಣ್ಣದ ವೇಷಧಾರಿ ಉಮೇಶ್ ಕುಪ್ಪೆಪದವು
- ತೆಂಕುತಿಟ್ಟು ಪ್ರಸಂಗಕರ್ತ, ಭಾಗವತ ಅಂಡಾಲ ದೇವಿಪ್ರಸಾದ್ ಶೆಟ್ಟಿ
- ತೆಂಕುತಿಟ್ಟು ಸ್ತ್ರೀವೇಷಧಾರಿ ಸುರೇಂದ್ರ ಮಲ್ಲಿ
- ಬಡಗುತಿಟ್ಟು ಹಿರಿಯ ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯ
- ಬಡಗುತಿಟ್ಟು ಸ್ತ್ರೀವೇಷಧಾರಿ, ಶಿವಮೊಗ್ಗದ ಶಿವಾನಂದ ಗೀಜಗಾರು
- ಬಡಗುತಿಟ್ಟು ಸ್ತ್ರೀವೇಷಧಾರಿ, ಹೊನ್ನಾವರದ ಮುಗ್ವಾ ಗಣೇಶ್ ನಾಯ್ಕ
- ಮೂಡಲಪಾಯ ಯಕ್ಷಗಾನ ಕಲಾವಿದ ಬೆಂಗಳೂರು ಗ್ರಾಮಾಂತರದ ಕೃಷ್ಣಪ್ಪ
- ತೆಂಕು ಹಾಗೂ ಬಡಗು ತಿಟ್ಟು ಕಲಾವಿದೆ, ಕಳಸದ ಜ್ಯೋತಿ ಹಳುವಳ್ಳಿ
ಇದರೊಂದಿಗೆ, 2024ರ ಸಾಲಿನ ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿಗೆ, ತೆಂಕುತಿಟ್ಟು ಯಕ್ಷಗಾನ ರಂಗದ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಭಾಜನರಾಗಿದ್ದಾರೆ.
Tags:
ಸುದ್ದಿ