ತೆಂಕು ತಿಟ್ಟಿನ ಹಿರಿಯ ಹಿಮ್ಮೇಳ ಗುರು ಗೋಪಾಲಕೃಷ್ಣ ಕುರುಪ್ ನಿಧನ


ಮಂಗಳೂರು: ಯಕ್ಷಗಾನದ ಹಿರಿಯ ಗುರು, ಹಿಮ್ಮೇಳ ವಾದಕ ಬಿ. ಗೋಪಾಲಕೃಷ್ಣ ಕುರುಪ್ (90) ಅವರು ಕಾಸರಗೋಡಿನಲ್ಲಿ ಮಂಗಳವಾರ (ಮಾರ್ಚ್‌ 18, 2025) ರಾತ್ರಿ ನಿಧನರಾಗಿದ್ದಾರೆ.
 
ಕೇರಳ ಮೂಲದವರಾದ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಿಶಿಲ ಸಮೀಪ ಬರ್ಗುಳದಲ್ಲಿ ನೆಲೆಸಿದ್ದರು. ಅವರು ನೀಲೇಶ್ವರದ ಪಟ್ಟೇನದಲ್ಲಿರುವ ಪುತ್ರಿಯ ಮನೆಯಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರ ಇದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಚೆಂಡೆ ಮತ್ತು ಮದ್ದಲೆಯ ತಾಳ–ಲಯದಲ್ಲಿ ಹಿಡಿತ ಸಾಧಿಸಿದ್ದ ಬರ್ಗುಳ ಗೋಪಾಲಕೃಷ್ಣ ಕುರುಪ್ ಅವರು ತೆಂಕು ತಿಟ್ಟು ಯಕ್ಷಗಾನದ ಅಧಿಕೃತ ಬಾಲಪಾಠವಾಗಿ ಬಳಕೆಗೆ ಪೂರಕವಾಗಿರುವ ಯಕ್ಷಗಾನ ತೆಂಕುತಿಟ್ಟಿನ ಮದ್ದಳೆವಾದನ ಕ್ರಮ ಎಂಬ ಪುಸ್ತಕ ಸಹಿತ ಹಲವಾರು ಪಠ್ಯಗಳನ್ನು ರಚಿಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದ ಲಲಿತ ಕಲಾಕೇಂದ್ರದಲ್ಲಿ ಸೇರಿದಂತೆ ವಿವಿಧೆಡೆ 60 ವರ್ಷಗಳಿಗೂ ಹೆಚ್ಚು ಕಾಲ ಯಕ್ಷಗಾನ ಹಿಮ್ಮೇಳ ಪಾಠ ಹೇಳಿ ದೊಡ್ಡ ಶಿಷ್ಯ ಪರಂಪರೆಯನ್ನು ಅವರು ಹೊಂದಿದ್ದಾರೆ. ಪರಂಪರೆಯ ತೆಂಕುತಿಟ್ಟಿನ ಭಾಗವತಿಕೆ ಅಥವಾ ಹಳೆಯ ಕ್ರಮದ ಪದ್ಯಗಳ ಗಾಯನದಲ್ಲಿಯೂ ಅವರು ಹೆಸರು ಗಳಿಸಿದ್ದರು.

ಉಡುಪಿಯಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ
ಗೋಪಾಲಕೃಷ್ಣ ಕುರುಪ್ ಅವರಿಗೆ ಗೌರವ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇರಳ ಸರ್ಕಾರದ ‘ಗುರುಪೂಜಾ’ ಪುರಸ್ಕಾರವು ಅವರಿಗೆ ದೊರೆತಿದೆ. ಕುರುಪ್ ಅವರ ಅಂತ್ಯ ಸಂಸ್ಕಾರ ಗುರುವಾರ ಸಂಜೆ ಪಟ್ಟೇನದ ಪಾಲಕ್ಕುಳಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಯಕ್ಷಗಾನ ಪ್ರಪಂಚದ ಚೆಂಡೆ-ಮದ್ದಳೆ ಭಾಗವತಿಕೆಯಲ್ಲಿ ಸಾವಿರಾರು ಶಿಷ್ಯರನ್ನು ತಯಾರು ಮಾಡಿರುವ ಅಪೂರ್ವ ಗುರು ಬಿ. ಗೋಪಾಲಕೃಷ್ಣ ಕುರುಪ್ ಅವರು.

ಆರು ದಶಕಗಳಿಂದ ಯಕ್ಷಗಾನ ಜಗತ್ತಿನಲ್ಲಿ ಶಿಷ್ಯನಾಗಿ, ಭಾಗವತನಾಗಿ, ಚೆಂಡೆ ಮದ್ದಳೆ ವಾದಕನಾಗಿ ಮುಮ್ಮೇಳದ ನಾಟ್ಯವನ್ನೂ ಬಲ್ಲವರಾಗಿ ಹೆಸರು ಮಾಡಿರುವುದು ಗೋಪಾಲಕೃಷ್ಣ ಕುರುಪ್ ಅವರ ಹೆಗ್ಗಳಿಕೆ. ದಕ್ಷಿಣ ಕನ್ನಡದ ಬರ್ಗುಳದವರಾದ ಗೋಪಾಲಕೃಷ್ಣ ಕುರುಪ್ ಐದನೇ ತರಗತಿಯವರೆಗೆ ಮಾತ್ರ ಓದಿ ಯಕ್ಷಗಾನದಲ್ಲಿ ಆಸಕ್ತರಾದವರು. ಬಲಿಪ ನಾರಾಯಣ ಭಾಗವತ, ಕುದ್ರೆಕೋಡು ರಾಮಭಟ್, ನಾರಂಪಾಡಿ ಸುಬ್ಬಯ್ಯ ಶೆಟ್ಟಿ ಮುಂತಾದವರ ಬಳಿ ಶಿಷ್ಯರಾಗಿದ್ದು, ಯಕ್ಷಗಾನವನ್ನು ಅರಿತುಕೊಂಡ ಕುರುಪ್ ಮೊದಲು ಸ್ತ್ರೀ ವೇಷ ಮಾಡುತ್ತಿದ್ದರು.

ಬುಡಕಟ್ಟು ದಲಿತರಿಗೆ, ಗಿರಿಜನರಿಗೆ, ಮಲೆಕುಡಿಯರಿಗೆ, ಮಹಿಳೆಯರಿಗೆ ಯಕ್ಷಗಾನದ ಹಿಮ್ಮೇಳ- ಮುಮ್ಮೇಳಗಳನ್ನು ಕಲಿಸಿದ ಕುರುಪ್ ಅವರು ಧರ್ಮಸ್ಥಳದ ಯಕ್ಷಗಾನ ಲಲಿತ ಕಲಾ ಕೇಂದ್ರದ ಪ್ರಾಚಾರ್ಯರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ಕುರಿತಂತೆ ಹಲವು ಕೃತಿಗಳನ್ನು ಬರೆದ ಕೀರ್ತಿ ಗೋಪಾಲಕೃಷ್ಣ ಕುರುಪ್ ಅವರದು.


2004ರಲ್ಲಿ ಕಾಂತಾವರ ಕನ್ನಡ ಸಂಘ ಮೂಲಕ ಪ್ರಕಾಶನಗೊಂಡ "ಚೆಂಡೆ-ಮದ್ದಲೆಗಳ ನಡುವೆ" ಎಂಬ ಆತ್ಮಕಥನವನ್ನೂ ಅವರು ಬರೆದಿದ್ದಾರೆ.

ಚೆಂಡೆ-ಮದ್ದಲೆ ನುಡಿತಗಳಲ್ಲಿ ಶಾಸ್ತ್ರಜ್ಞಾನವನ್ನು ಪಡೆದುಕೊಂಡಿದ್ದ ಕುರುಪರು ಅದನ್ನು ಅಧಿಕೃತ ಪಠ್ಯರೂಪದಲ್ಲಿ ಪ್ರಕಟಿಸಿದ ಮೊದಲಿಗರಾಗಿದ್ದರು. ಅವರಿಗೆ ಭಾಗವತಿಕೆಯ ಬಗ್ಗೆಯೂ ಆಳವಾದ ಜ್ಞಾನವಿತ್ತು. 1952 ರಲ್ಲಿ ಕೂಡ್ಲು ಮೇಳದಲ್ಲಿ ಪೂರ್ವರಂಗಕ್ಕೆ ಹಾಡುವ ಅವಕಾಶ ದೊರೆತು ಮದ್ಲೆಗಾರ ಕುದ್ರೆಕೂಡ್ಲು ರಾಮಭಟ್ಟರ ಮೆಚ್ಚುಗೆಗಳಿಸಿ, ಮುಂದೆ, ವೃತ್ತಿಪರರಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತ, ಹಿರಿಯ ಅಗರಿ ಶ್ರೀನಿವಾಸ ಭಾಗವತ, ಹಿರಿಯ ಕುದ್ರೆಕೂಡ್ಲು ರಾಮ ಭಟ್ಟ, ನಾಂಬಾಡಿ ಸುಬ್ಬಯ ಶೆಟ್ಟಿ, ನೆಡ್ಲೆ ನರಸಿಂಹ ಭಟ್ಟ ಮೊದಲಾದವರ ಗುರುತನದಲ್ಲಿ ಜ್ಞಾನವನ್ನು ಸಿದ್ಧಿಸಿಕೊಂಡು, ಅದೇ ಶ್ರದ್ಧೆಯಲ್ಲಿ ಗುರುಗಳಾಗಿ ಅನೇಕ ಮಂದಿ ಶಿಷ್ಯರನ್ನು ಸಿದ್ಧಗೊಳಿಸಿದ್ದರು. ಮೃದಂಗ ವಿದ್ವಾನ್‌ ಟಿ. ಆರ್‌. ಕೃಷ್ಣನ್‌ರಲ್ಲಿ ಮೃದಂಗ ನುಡಿತದ ಸೂಕ್ಷ್ಮಗಳನ್ನು ಕಲಿತಿದ್ದರು. ಅನೇಕ ಯಕ್ಷಗಾನ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. 80ರ ದಶಕದಲ್ಲಿ  ಕು. ಶಿ. ಹರಿದಾಸ ಭಟ್ಟ, ಮುಳಿಯ ಮಹಾಬಲ ಭಟ್ಟರ ನೇತೃತ್ವದಲ್ಲಿ ಎಂಜಿಎಂ ಕಾಲೇಜಿನ ಆರ್‌ಆರ್‌ಸಿಯಲ್ಲಿ ಜರಗಿದ ಹಿಮ್ಮೇಳದ ದಾಖಲಾತಿ ಕಮ್ಮಟದಲ್ಲಿ ಓರ್ವ ಪ್ರಮುಖ ಆಕರ ವ್ಯಕ್ತಿಯಾಗಿದ್ದರು. ಸುಳ್ಯದ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯ ದಾಖಲಾತಿಯಲ್ಲಿ ಬಲಿಪ ನಾರಾಯಣ ಭಾಗವತರ ಹಾಡುಗಳಿಗೆ ಕುರುಪರು ನೀಡಿದ ಮದ್ದಲೆ ಸಾಥಿಯ ಕೌಶಲ, ಅವರ ತಾಳ-ಲಯಗಳ ಕುರಿತ ಅವರ ತಳಸ್ಪರ್ಶಿ ಅನುಭವವನ್ನು ಅನಾವರಣಗೊಳಿಸುತ್ತದೆ.

ಯಕ್ಷಗಾನದ ಹಿಮ್ಮೇಳ ವಿಭಾಗಕ್ಕೊಂದು ಲಕ್ಷಣಗ್ರಂಥವನ್ನು ರಚಿಸುವ ನಿಟ್ಟಿನ ಪ್ರಯತ್ನವಾಗಿ ‘ತೆಂಕುತಿಟ್ಟು-ಪ್ರಾಥಮಿಕ ಯಕ್ಷಗಾನ ಪಾಠಗಳು’ ಕೃತಿಯನ್ನು ಬರೆದು ಪ್ರಕಟಿಸಿದ್ದರು. ಆ ಬಳಿಕ ‘ತೆಂಕುತಿಟ್ಟು ಯಕ್ಷಗಾನದ ಮದ್ದಲೆವಾದನ ಕ್ರಮ’ ಮತ್ತು ‘ತೆಂಕುತಿಟ್ಟು ಯಕ್ಷಗಾನದ ಚೆಂಡೆವಾದನ ಕ್ರಮ’ ಎಂಬ ಪ್ರಮುಖ ಕೃತಿಗಳನ್ನು ರಚಿಸಿದ್ದರು. ಯಕ್ಷಗಾನದ ತಾಳ ಸಂಬಂಧಿ ಅಧ್ಯಯನದ ಭಾಗವಾಗಿ ‘ತ್ತಿತ್ತಿತ್ತೆ’ ಎಂಬ ಪ್ರತ್ಯೇಕ ಕೃತಿ ಬರೆದಿರುವುದು ಅವರ ವಿದ್ವತ್ತಿನ ಪ್ರತೀಕವಾಗಿತ್ತು. ಮೈಸೂರಿನ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರು ಕುರುಪರ ಕೃತಿಗಳನ್ನು ಯಕ್ಷಗಾನ ಕ್ಷೇತ್ರದ ಪಾಂಡಿತ್ಯಪೂರ್ಣ ಕೊಡುಗೆಗಳೆಂದು ಶ್ಲಾಘಿಸಿದ್ದರು. ‘ಚೆಂಡೆ-ಮದ್ದಲೆಗಳ ನಡುವೆ’ ಎಂಬ ಶಿೀರ್ಷಿಕೆಯಲ್ಲಿ ಆತ್ಮಕಥನವನ್ನು ಕೂಡ ಪ್ರಕಟಿಸಿದ್ದಾರೆ.

ಧರ್ಮಸ್ಥಳ, ಕರ್ನಾಟಕ, ಬಳ್ಳಂಬೆಟ್ಟು, ಇರಾ, ಕರ್ನಾಟಕ-ಕಲಾವಿಹಾರ ಮೇಳಗಳಲ್ಲಿ ತಿರುಗಾಟ ನಡೆಸಿರುವ ಕುರುಪ್‌ ಅವರು ಸುತ್ತಮುತ್ತಲ ಊರುಗಳಲ್ಲಿ ಯಕ್ಷಗಾನ ಹಿಮ್ಮೇಳ ತರಗತಿಗಳನ್ನು ನಡೆಸಿ ಯಕ್ಷಗಾನ ಶಿಕ್ಷಕರಾಗಿ ಹೆಸರು ಪಡೆದವರು. ಆಸಕ್ತರು, ಜಿಜ್ಞಾಸುಗಳು ಸಿಕ್ಕಿದರೆ ಎಲ್ಲೆಂದರಲ್ಲಿ ತಾಳ-ಲಯ-ಛಂದಸ್ಸು ಇತ್ಯಾದಿ ವಿಷಯಗಳ ಬಗ್ಗೆ ಅವಿಶ್ರಾಂತವಾಗಿ ಚರ್ಚಿಸುತ್ತಿದ್ದರು. ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಮೂರು ವರ್ಷ ಹಿಮ್ಮೇಳದ ಗುರುಗಳಾಗಿ ಸೇವೆ ಸಲ್ಲಿಸಿದ್ದರು.

ಕೇರಳ ಮೂಲದವರಾದ ಕುರುಪ್‌ ಅವರ ಹಿರಿಯರು ದಕ್ಷಿಣಕನ್ನಡ ಜಿಲ್ಲೆಯ ಶಿಶಿಲದಲ್ಲಿ ನೆಲೆಸಿದವರು. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ಬಹುಕಾಲ ವಾಸವಿದ್ದ ಅವರು ಇತ್ತೀಚೆಗಿನ ದಿನಗಳಲ್ಲಿ ಕೇರಳದ ನಿಲೇಶ್ವರದ ಮಕ್ಕಳ ಮನೆಯಲ್ಲಿ ನೆಲೆಸಿದ್ದರು. ಯಕ್ಷಗಾನದ ಕಲಾರಂಗದ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಜರಗಿದ ಕೋಳ್ಯೂರು ರಾಮಚಂದ್ರ ರಾವ್‌- 90 ಸಂಭ್ರಮಕ್ಕಾಗಿ ನೀಲೇಶ್ವರದ ಮನೆಯಲ್ಲಿಯೇ ಗೋಪಾಲಕೃಷ್ಣ ಕುರುಪ್‌ ಅವರ ಅಭಿನಂದನೆಯ ನುಡಿಗಳನ್ನು ದಾಖಲಿಸಿದ್ದು ಇಲ್ಲಿ ಸ್ಮರಣೀಯ. ಯಕ್ಷಗಾನ ಕಲಾರಂಗದ ಪ್ರಶಸ್ತಿಗೂ ಅವರು ಭಾಜನರಾಗಿದ್ದರು. 

ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌, ಕಾರ್ಯದರ್ಶಿ ಮುರಲಿ ಕಡೆಕಾರ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ಗೋಪಾಲಕೃಷ್ಣ ಕುರುಪ್ ಅವರು ಟೊರೆಂಟೋದಲ್ಲಿ ಮಾತನಾಡಿದಾಗ... ಅಪರೂಪದ ವಿಡಿಯೊ ನೋಡಿ.

ಕೋಳ್ಯೂರು ರಾಮಚಂದ್ರ ರಾವ್ ಅವರ ಬಗ್ಗೆ ಇತ್ತೀಚೆಗೆ ಗೋಪಾಲಕೃಷ್ಣ ಕುರುಪ್ ಮಾತನಾಡಿದಾಗ...



ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು