ಲೇಖಕರು: ದಾಮೋದರ ಶೆಟ್ಡಿ, ಇರುವೈಲು [ಮುಂಬಯಿ ನಿವಾಸಿ, ಹವ್ಯಾಸಿ ವೇಷಧಾರಿ]
ಬಹಳ ಹಿಂದೆ ಭೂಮಿಯನ್ನು ಮುಚುಕುಂದ ಎಂಬ ರಾಜನು ಆಳುತ್ತಿದ್ದ. ಆತ ಧರ್ಮ ಪರಿಪಾಲಕನಾಗಿದ್ದು, ದೇವತೆಗಳ ಮಿತ್ರನಾಗಿದ್ದ. ಹೀಗಿರಲು ಒಂದು ದಿನ ರಾಕ್ಷಸರು ದೇವತೆಗಳ ಮೇಲೆ ದಾಳಿ ಮಾಡಿದರು. ಆಗ ದೇವತೆಗಳು ಮುಚುಕುಂದನ ಸಹಾಯ ಯಾಚಿಸಿದರು. ಮುಚುಕುಂದ ಅವರಿಗೆ ಸಹಾಯ ಮಾಡಲು ಒಪ್ಪಿ ದೇವತೆಗಳ ಜೊತೆಗೆ ತೆರಳಿದ.
ಆ ಯುದ್ಧ ಸಹಸ್ರಾರು ವರುಷಗಳ ತನಕ ನಡೆಯಿತು. ಕೊನೆಗೆ ದೇವತೆಗಳಿಗೆ ಜಯವಾಯಿತು. ಯುದ್ಧದಲ್ಲಿ ಮುಚುಕುಂದ ತೀವ್ರವಾಗಿ ದಣಿದಿದ್ದ. ತಮಗೆ ಜಯವನ್ನು ಸಂಪಾದಿಸಿಕೊಟ್ಟ ಮುಚುಕುಂದನಿಗೆ ದೇವತೆಗಳು ವರವನ್ನು ನೀಡಲು ಮುಂದಾದರು.
ಮುಚುಕುಂದ ತೀರಾ ದಣಿದ ಕಾರಣ ತನಗೆ ವಿಶ್ರಾಂತಿ ಬೇಕೆಂದು ಕೇಳಿದ .ಇದಕ್ಕೆ ಸರಿ ಎಂದ ದೇವತೆಗಳು ಯಾರಾದರೂ ಭೂಲೋಕದಲ್ಲಿ ಮುಚುಕುಂದನ ನಿದ್ದೆಗೆ ಭಂಗ ತಂದರೆ ಅವರು ಅಲ್ಲೇ ಸುಟ್ಟು ಬೂದಿಯಾಗಲಿ ಎಂದು ಹರಸಿದರು. ಮುಚುಕುಂದ ಭೂಲೋಕಕ್ಕೆ ಮರಳಿ ಒಂದು ಗುಹೆಯಲ್ಲಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ.
ಆಗಷ್ಟೇ ದ್ವಾಪರ ಯುಗ ಪ್ರಾರಂಭವಾಗಿತ್ತು. ಕಾಲಯವನ ಎಂಬೊಬ್ಬ ರಾಕ್ಷಸ ಆ ಕಾಲದಲ್ಲಿ ಮದಾಂಧನಾಗಿ ಮೆರೆಯುತ್ತಿದ್ದ. ಒಮ್ಮೆ ಕಾಲಯವನನಿಗೂ ಕೃಷ್ಣನಿಗೂ ಭಯಂಕರ ಯುದ್ಧವಾಗುತ್ತದೆ. ಆಗ ಕೃಷ್ಣನಿಗೆ ಮುಚುಕುಂದನ ನೆನಪಾಗುತ್ತದೆ. ಕೂಡಲೇ ಆತ ಕಾಲಯವನನಿಂದ ತಪ್ಪಿಸಿಕೊಂಡು ಮುಚುಕುಂದ ಇರುವ ಗುಹೆಗೆ ಹೋಗಿ ಅಲ್ಲಿ ಅಡಗುತ್ತಾನೆ.
ಕಾಲಯವನನೂ ಕೃಷ್ಣನ ಹಿಂದೆ ಓಡಿ ಬರುತ್ತಾನೆ ಮತ್ತು ಅಲ್ಲಿ ಮಲಗಿದ್ದ ಮುಚುಕುಂದನನ್ನೇ ಕೃಷ್ಣ ಎಂದು ಭಾವಿಸಿ ಅವನಿಗೆ ಒದೆಯುತ್ತಾನೆ. ಇದರಿಂದ ಎಚ್ಚರಗೊಂಡ ಮುಚುಕುಂದ ಕಣ್ಣು ಬಿಡಲು ಅಲ್ಲೇ ನಿಂತಿದ್ದ ಕಾಲಯವನ ಕಣ್ಣಿಗೆ ಬೀಳುತ್ತಾನೆ ಮತ್ತು ಕಾಲಯವನ ಮುಚುಕುಂದನಿಗಿದ್ದ ವರ ಪ್ರಭಾವದಿಂದ ಅಲ್ಲೇ ಸತ್ತು ಕೆಳಗೆ ಬೀಳುತ್ತಾನೆ. ಹೀಗೆ ಕಾಲಯವನ ರಾಕ್ಷಸನ ಅಂತ್ಯವಾಗುತ್ತದೆ.
ಆಗ ಕೃಷ್ಣ ಅಡಗಿದ್ದ ಜಾಗದಿಂದ ಹೊರಬಂದು ತನ್ನ ಭಕ್ತನಾದ ಮುಚುಕುಂದನಿಗೆ ಮೋಕ್ಷವನ್ನು ಕರುಣಿಸುತ್ತಾನೆ.
Tags:
ಪುರಾಣ