ಸುಧಾಮ ಶ್ರೀಕೃಷ್ಣನ ಬಾಲ್ಯದ ಸ್ನೇಹಿತ. ಕುಚೇಲ ಎನ್ನುವುದು ಸುಧಾಮನ ಇನ್ನೊಂದು ಹೆಸರು. ಶ್ರೀಕೃಷ್ಣ ಮತ್ತು ಸುಧಾಮ ಸಾಂದೀಪನಿ ಮುನಿಯ ಆಶ್ರಮದಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದವರು. ಶ್ರೀಕೃಷ್ಣ ಮತ್ತು ಸುಧಾಮನ ಸಾಮಾಜಿಕ ಸ್ಥಿತಿಗತಿ, ಸ್ಥಾನಮಾನಗಳು ಇಬ್ಬರ ಆತ್ಮೀಯ ಗೆಳೆತನದ ಸಂಬಂಧವನ್ನೇನೂ ಹಾಳುಮಾಡಲಿಲ್ಲ.
ವಿದ್ಯೆ ಕಲಿತು ಅವರವರು ಅವರವರ ಹಾದಿ ಹಿಡಿದರು. ಆ ಬಳಿಕದ ಕಥೆಯೇನೆಂದರೆ, ಸುಧಾಮನಿಗೆ ಇಬ್ಬರು ಮಕ್ಕಳು. ಆತ ತುಂಬಾ ಬಡವನಾಗಿದ್ದ. ಬಡತನವನ್ನು ಸಹಿಸುವುದು, ಬದುಕುವುದು ಅಸಾಧ್ಯವಾದಾಗ, 'ನಿಮ್ಮ ಸ್ನೇಹಿತ ಶ್ರೀಕೃಷ್ಣನಿಂದ ಏನಾದರೂ ಸಹಾಯ ಕೇಳಿ, ಮಾಡಿಯಾನು' ಎಂದು ಪತ್ನಿ ಸಲಹೆ ನೀಡಿದಳು. ಸಹಾಯ ಕೇಳಲು ಮುಜುಗರ. ಆದರೂ ಸುಧಾಮನು ಶ್ರೀಕೃಷ್ಣನಲ್ಲಿಗೆ ಹೊರಟ. ಹೋಗುವಾಗ ಒಂದು ಬಟ್ಟೆಯ ಗಂಟಿನಲ್ಲಿ ಒಂದಿಷ್ಟು ಅವಲಕ್ಕಿ ಕಟ್ಟಿಕೊಂಡು ಹೋದ. ಶ್ರೀಕೃಷ್ಣನಿಗೆ ಕೊಡಲು ಬಡ ಸುಧಾಮನ ಬಳಿ ಬೇರೆ ಏನೂ ಇರಲಿಲ್ಲ.
ಸುಧಾಮನನ್ನು ಕಂಡು ಖುಷಿಪಟ್ಟ ಶ್ರೀಕೃಷ್ಣ, ಅವನನ್ನು ಬಹಳ ಆದರದಿಂದ ಬರಮಾಡಿಕೊಂಡ. ಅವನಿಗೆ ರಾಜಮರ್ಯಾದೆ ನೀಡಿದ. ಸುಧಾಮ ಹಿಂಜರಿಕೆಯಿಂದಲೇ ನೀಡಿದ ಅವಲಕ್ಕಿಯನ್ನು ಬಹಳ ಇಷ್ಟಪಟ್ಟು ತಿಂದ. 'ಎಷ್ಟು ರುಚಿಯಾಗಿದೆ ನೀನು ಮನೆಯಿಂದ ತಂದ ಅವಲಕ್ಕಿ' ಎಂದು ಖುಷಿಪಟ್ಟ. ಶ್ರೀಕೃಷ್ಣ ತನಗೆ ನೀಡಿದ ಸತ್ಕಾರ ಕಂಡು ಸುಧಾಮನಿಗೆ ಮಾತೇ ಹೊರಡದಂತೆ ಆಯಿತು. ಅಲ್ಲಿಯ ವೈಭೋಗವನ್ನು ನೋಡಿದ ಮೇಲೆ ತಾನು ಬಂದಿದ್ದು ಏಕೆ ಎಂಬುದನ್ನೇ ಮರೆತ ಸುಧಾಮ ಮನೆಗೆ ಮರಳಿದ. ಅಥವಾ ಇಷ್ಟೊಳ್ಳೆಯ ಸತ್ಕಾರ ನೀಡಿದ ಕೃಷ್ಣನನ್ನು ಕೇಳುವುದೆಂತು? ಈ ಯೋಚನೆಯೂ ಆಗಿದ್ದಿರಬಹುದು. ಮನೆಗೆ ಮರಳಿದ.
ಆದರೆ, ಆಶ್ಚರ್ಯವೆಂಬಂತೆ ಸುಧಾಮ ಮನೆಗೆ ಮರಳಿದಾಗ ತನ್ನ ಗುಡಿಸಲು ಇದ್ದ ಜಾಗದಲ್ಲಿ ದೊಡ್ಡ ಮನೆ ತಲೆ ಎತ್ತಿರುವುದನ್ನು ಕಂಡು ಆಶ್ಚರ್ಯಚಕಿತನಾಗುತ್ತಾನೆ. ಅಷ್ಟೇ ಅಲ್ಲ, ಶ್ರೀಕೃಷ್ಣನು ಸುಧಾಮನ ಕುಟುಂಬಕ್ಕೆ ಹಣದ ಸಹಾಯವನ್ನೂ ಮಾಡಿದ್ದ. ತಾನು ಬಾಯಿಬಿಟ್ಟು ಕೇಳದಿದ್ದರೂ ತನ್ನ ಅಗತ್ಯ ಏನು ಎಂಬುದನ್ನು ಅರ್ಥಮಾಡಿಕೊಂಡ ಬಾಲ್ಯದ ಗೆಳೆಯ ಶ್ರೀಕೃಷ್ಣನಿಗೆ ಸುಧಾಮ ಕೃತಜ್ಞತೆ ಸಮರ್ಪಿಸಿದ.
ಇದು ಪರಿಶುದ್ಧ ಗೆಳೆತನಕ್ಕೆ ಆಸ್ತಿ-ಅಂತಸ್ತು ನಗಣ್ಯ ಎಂದು ಸಾರುವ ಒಂದು ಘಟನೆ.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ