ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ನಲ್ಲಿ ರಂಗಾಯಣವನ್ನು ನಿರ್ಮಿಸಲು ಸಿದ್ಧತೆ ನಡೆದಿದ್ದು, ನಾಟಕ ಮತ್ತು ಯಕ್ಷಗಾನಗಳಿಗೆ ಒತ್ತು ನೀಡಲು ಇದನ್ನು ಯಕ್ಷ ರಂಗಾಯಣವಾಗಿಸಲಾಗುತ್ತದೆ ಎಂಬ ಸುದ್ದಿಯ ನಡುವೆ, ಯಕ್ಷಗಾನದ ಉಳಿವಿನ ಬಗ್ಗೆಯೂ ಧ್ವನಿ ಕೇಳಿಬರುತ್ತಿದೆ. ಸುರೇಂದ್ರ ಪಣಿಯೂರ್ ಅವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ನಿಮ್ಮ ಅಭಿಪ್ರಾಯ ತಿಳಿಸಿ.
ಯಕ್ಷಗಾನ ಹಾಗೂ ನಾಟಕ ಪ್ರಕಾರಗಳು ಸ್ವತಂತ್ರ ಕಲೆಯಾಗಿದ್ದು, ಇವೆರಡೂ ಪರಸ್ಪರ ಸಮ್ಮಿಳಿತಗೊಂಡಲ್ಲಿ ಅವುಗಳ ಅಸ್ಮಿತೆಗೆ ಅಪಾಯ ಆಗುವ ಸಂಭವವಿದೆ.
ಈಗಂತೂ ಯಕ್ಷಗಾನ ಕ್ಷೇತ್ರವು ಅಗ್ಗದ ಪ್ರಚಾರಕ್ಕೆ ಒಗ್ಗಿಕೊಂಡು ಕ್ಷಣಿಕವಾದ ಜನಾಕರ್ಷಣೆಯನ್ನು ಹೊಂದುವ ಅಭಿಲಾಷೆಯಿಂದ ನಾಟಕ, ಸಿನೆಮಾ, ಟಿವಿ, ಧಾರಾವಾಹಿಗಳ ಅನುಕರಣೆಯನ್ನು ಮಾಡಿ ಸಾಂಪ್ರದಾಯಿಕ ಯಕ್ಷಗಾನವನ್ನು ಕಾಣೆಯಾಗಿಸಿ ಯಕ್ಷನಾಟಕವೇ ವಿಜೃಂಭಿಸಿ ಪ್ರದರ್ಶನಗೊಳ್ಳುತ್ತಿದೆ. ಯಕ್ಷಗಾನ ಕಲೆ ಕುಲಗೆಡುವತ್ತ ಸಾಗಿದೆ.
ಪ್ರಸ್ತುತ ಈ ರೀತಿಯ ಪರಿಸ್ಥಿತಿಯಲ್ಲಿ ಯಕ್ಷಗಾನ ಹಾಗೂ ನಾಟಕ ಕಲೆಯನ್ನು ಒಂದೇ ಸೂರಿನಡಿ ತಂದಲ್ಲಿ ಯಕ್ಷನಾಟಕಕ್ಕೆ ಅಧಿಕೃತ ಮುದ್ರೆ ಒತ್ತಿದಂತಾಗಿ ಇನ್ನಷ್ಟು ಹಾಳಾಗುವುದು ನಿಶ್ಚಯ.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಪ್ರಸ್ತುತ ನಾಟಕರಂಗ ಸಂಸ್ಥೆಗಳು ಕಲಾ ಅಭಿನಯಕ್ಕೆ ಅನುಕೂಲವಾಗುವ ಲಯ, ತಾಳ, ನರ್ತನದ ಪ್ರಾಥಮಿಕ ಅಭ್ಯಾಸಕ್ಕಾಗಿ ನಾಟಕ ಕಲಿಯುವ ಆಸಕ್ತರನ್ನು ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಕಳಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಉದಾ: ಉಡುಪಿ ಯಕ್ಷಗಾನ ಕೇಂದ್ರಕ್ಕೆ ದೇಶದ ಎಲ್ಲೆಡೆಯಿಂದ ರಂಗ ಕರ್ಮಿಗಳು ಅಭ್ಯಾಸಕ್ಕಾಗಿ ಆಗಮಿಸುತ್ತಿದ್ದಾರೆ.
ಯಕ್ಷಗಾನ ಹಾಗೂ ನಾಟಕ ಕಲೆಗಳಿಗೆ ಅವುಗಳದ್ದೇ ನಿರ್ವಚನ, ನಿರೂಪಣೆಯಿಂದ ಕೂಡಿದ ರಂಗ ಹಾಗೂ ಕ್ಷೇತ್ರ ಇದೆ. ಅದೇ ರೀತಿಯಲ್ಲಿ ರಂಗಾಯಣ ಸಂಸ್ಥೆಯನ್ನು ಹುಟ್ಟು ಹಾಕಿರುವ ಬಿ.ವಿ.ಕಾರಂತರ ಉದ್ದೇಶವೂ ನಾಟಕ ರಂಗದ ಅಭ್ಯಾಸಕ್ಕೆ ಅನುಕೂಲವಾಗಿರಲೆಂದೇ ಆಗಿತ್ತು. (ಸ್ವತಃ ಬಿ.ವಿ.ಕಾರಂತರೇ ಯಕ್ಷಗಾನದ ಅಂಶಗಳನ್ನು ನಾಟಕದಲ್ಲಿ ಸಮರ್ಥವಾಗಿ ಬಳಸಿಕೊಂಡವರು.)
ಅದೇ ರೀತಿಯಲ್ಲಿ ಕಡಲ ತಡಿಯ ಭಾರ್ಗವರೆನಿಸಿದ ಕೋಟ ಶಿವರಾಮ ಕಾರಂತರು ಯಕ್ಷಗಾನ ಕಲೆಯ ಸಂರಕ್ಷಣೆಗಾಗಿ, ಅಧ್ಯಯನಕ್ಕಾಗಿ ಹುಟ್ಟು ಹಾಕಿದ ಉಡುಪಿ ಯಕ್ಷಗಾನ ಕೇಂದ್ರವು ವಿಶ್ವದೆಲ್ಲೆಡೆ ಯಕ್ಷಗಾನದ ಕಂಪನ್ನು ಪಸರಿಸಿದ ಏಕೈಕ ಖಾಸಗಿ ಸಂಸ್ಥೆ.
ಇಂತಹ ಇತಿಹಾಸ ಇರುವ ಎರಡು ವಿಭಿನ್ನವಾದ ಕಲೆಗಳನ್ನು ಒಂದೇ ಸೂರಿನಡಿ ತಂದು ಯಕ್ಷಗಾನ ಹಾಗೂ ನಾಟಕವನ್ನು ಮಿಶ್ರಗೊಳಿಸಿ ಯಕ್ಷರಂಗಾಯಣ ಎಂದು ಸಂಕರಗೊಳಿಸುವ ಬದಲು ಅದು ಕೇವಲ ರಂಗಾಯಣವಾಗಿಯೇ ಇರಲೆಂದು ಆಶಯ.
ಅದೇ ರೀತಿಯಲ್ಲಿ ಯಕ್ಷಗಾನ ಕಲೆಯ ಸರ್ವಾಂಗೀಣ ಅಧ್ಯಯನಕ್ಕಾಗಿ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳಾಗಿಸಿ ಯಕ್ಷಗಾನ ಅಕಾಡೆಮಿಯನ್ನೂ ಒಳಗೊಂಡ ಒಂದು ರಂಗಾಯಣ ಮಾದರಿಯ ರೆಪರ್ಟರಿ ಸಂಸ್ಥೆಯನ್ನು ಸರಕಾರದ ವತಿಯಿಂದ ನಡೆಸುವ ಅಗತ್ಯವಿದೆ. ಇದರಿಂದ ಈಗಾಗಲೇ ಅನ್ಯರಂಗದ ಅಪಸವ್ಯಗಳ ಮೂಲಕ ಹಾದಿ ತಪ್ಪಿರುವ ಪ್ರಪಂಚದೆಲ್ಲೆಡೆ ಖ್ಯಾತಿ ಹೊಂದಿದ ಯಕ್ಷಗಾನ ಕಲೆಯ ಸಂಪ್ರದಾಯಿಕ ಸೊಗಡನ್ನು ಮುಂದಿನ ಪೀಳಿಗೆಗೆ ಅನನ್ಯವಾಗಿ ಕಾಯ್ದಿರಿಸಬಹುದಾಗಿದೆ
ಈ ರೀತಿಯ ಕೆಲಸವನ್ನು ಈಗಾಗಲೇ ನೆರೆಯ ರಾಜ್ಯ ಕೇರಳದಲ್ಲಿ ಸರಕಾರದ ವತಿಯಿಂದ ಕಥಕ್ಕಳಿ ಕಲೆಯ ಉಳಿವಿಗಾಗಿ ಕಲಾಮಂಡಲಂ ಎಂಬ ಸಂಸ್ಥೆಯ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿ ಶ್ಲಾಘನೀಯವೆನಿಸಿದೆ.
ನನ್ನ ಈ ಅನಿಸಿಕೆಗಳು ಯಕ್ಷಗಾನ ಕ್ಷೇತ್ರದಲ್ಲಿ ದೀರ್ಘಕಾಲ ದುಡಿದ ಅನುಭವದಿಂದ ಬಂದ ಕೇವಲ ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು ಅದೇ ಅಂತಿಮವಲ್ಲ. ಜೊತೆಗೆ ಈ ಕುರಿತು ಯಕ್ಷಗಾನ ಹಾಗೂ ನಾಟಕರಂಗದಲ್ಲಿರುವ ನುರಿತ ಅನುಭವ ಇರುವ ವಿದ್ವಾಂಸರನ್ನು ಚರ್ಚೆಗೆ ಒಳಪಡಿಸಿ ಅವರ ಒಗ್ಗೂಡಿ ಅಭಿಮತ, ಅಭಿಪ್ರಾಯಗಳೂ ತೀರ್ಮಾನ ತೆಗೆದುಕೊಳ್ಳುವಲ್ಲಿ ಸಹಕಾರಿಯಾಗಬಹುದು.
ಸುಮಾರು 600 ವರ್ಷಗಳಿಗೂ ಮಿಕ್ಕಿದ ಇತಿಹಾಸ ಇರುವ ಉಡುಪಿಯನ್ನೇ ಕೇಂದ್ರವಾಗಿಸಿಕೊಂಡು ಆರಂಭಗೊಂಡು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭದ್ರ ನೆಲೆ ಕಂಡುಕೊಂಡ ಯಕ್ಷಗಾನ ಕಲೆಯ ಉಳಿವಿಗೆ ಸದ್ಯ ಒಂದು ಅಕಾಡೆಮಿಕ್ ರೆಪರ್ಟರಿಯ ಅತೀ ಅಗತ್ಯವಿದೆ. ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸನ್ಮಾನ್ಯ ವಿ.ಸುನಿಲ್ ಕುಮಾರ್ ಅವರ ಅಧಿಕಾರಾವಧಿಯಲ್ಲೇ ಆಗಲಿ ಎಂದು ಆಶಿಸುವೆ..
ರಂಗಾಯಣವು ಉಡುಪಿ ಜಿಲ್ಲೆಯಲ್ಲಿ ಎಲ್ಲೇ ಆಗಲಿ, ಅದು ನನೆಗುದಿಗೆ ಬೀಳದೆ ಆಗಬೇಕು. ಅದು ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ನ ಆವರಣದಲ್ಲಿ ಕಾರ್ಯನಿರ್ವಹಿಸಿದಲ್ಲಿ ಅದೊಂದು ಐತಿಹಾಸಿಕ ತೀರ್ಮಾನವೂ ಆಗಬಹುದು. ಜೊತೆಗೆ ಯಕ್ಷಗಾನ ಅಕಾಡೆಮಿಕ್ ರೆಪರ್ಟರಿಯೂ ಆಗಲಿ ಎಂಬ ಆಶಯ. ಇದಕ್ಕೆ ಶುಭಸ್ಯ ಶೀಘ್ರಂ.
✒️ ಸುರೇಂದ್ರ ಪಣಿಯೂರು
Tags:
ಲೇಖನ