![]() |
ಲೀಲಾವತಿ ಬೈಪಾಡಿತ್ತಾಯ ಆತ್ಮಕಥನ ಯಕ್ಷ ಗಾನಲೀಲಾವಳಿ ಹಾಗೂ ಬೈಪಾಡಿತ್ತಾಯ ದಂಪತಿ ಅಭಿನಂದನ ಗ್ರಂಥ ಶ್ರೀಹರಿಲೀಲಾ-ಯಕ್ಷಗಾನ ಕಲಾಯಾನವನ್ನು ಕಟೀಲು ಹರಿನಾರಾಯಣದಾಸ ಆಸ್ರಣ್ಣರು ಬಿಡುಗಡೆಗೊಳಿಸಿದರು. |
ಮೂಡುಬಿದಿರೆ: ಇಲ್ಲಿನ ಆಲಂಗಾರು ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 2021 ನವೆಂಬರ್ 7ರ ಭಾನುವಾರ, ಹರಿನಾರಾಯಣ ಬೈಪಾಡಿತ್ತಾಯ-ಲೀಲಾವತಿ ಬೈಪಾಡಿತ್ತಾಯ ದಂಪತಿಯ ಅಮೃತ ಮಹೋತ್ಸವ ಪ್ರಯುಕ್ತ "ಶ್ರೀಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ" ಕಾರ್ಯಕ್ರಮದಲ್ಲಿ ಎರಡು ಅಮೂಲ್ಯ ಗ್ರಂಥಗಳು ಲೋಕಾರ್ಪಣೆಗೊಂಡವು.
ಯಕ್ಷಗಾನ ಲೋಕ ಕಂಡ ಪ್ರಥಮ ವ್ಯವಸಾಯಿ ಮಹಿಳಾ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ 'ಯಕ್ಷ ಗಾನ-ಲೀಲಾವಳಿ' ಹಾಗೂ ಬೈಪಾಡಿತ್ತಾಯ ದಂಪತಿಗೆ ಅರ್ಪಿಸಿದ ಅಭಿನಂದನ ಗ್ರಂಥ 'ಶ್ರೀ ಹರಿಲೀಲಾ ಯಕ್ಷಗಾನ ಕಲಾಯಾನ' ಕೃತಿಗಳನ್ನು ವಿಶಿಷ್ಟ ರೀತಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಯಕ್ಷಗಾನದ ಕಾರ್ಯಕ್ರಮವಾದುದರಿಂದ, ಚೌಕಿಯ ಪೆಟ್ಟಿಗೆಯೊಳಗಿನಿಂದ ವೇಷಭೂಷಣ, ಆಭರಣಗಳು, ಪಕಡಿ ಕಿರೀಟ, ಜಾಗಟೆ-ಕೋಲು, ಶ್ರುತಿಪೆಟ್ಟಿಗೆ ಎಲ್ಲವನ್ನೂ ಒಂದೊಂದಾಗಿ ಹೊರತೆಗೆದು, ಬಳಿಕ ಸೋಗಲೆ (ಸೋಗವಲ್ಲಿ)ಯಲ್ಲಿ ಸುತ್ತಿಟ್ಟಿದ್ದ ಎರಡು ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು.
ಕಟೀಲಿನ ಆನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣ ದಾಸ ಆಸ್ರಣ್ಣರು ಉಭಯ ಗ್ರಂಥಗಳನ್ನು ಹೀಗೆ ವಿಶಿಷ್ಟವಾಗಿ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ, ಕಲಾವಿದ ಪ್ರೊ.ಎಂ.ಎಲ್.ಸಾಮಗ, ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಟಿ.ಶ್ಯಾಮ್ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಮೋಹನ್ ಆಳ್ವ, ಬಿ.ನಾಗರಾಜ ಶೆಟ್ಟಿ, ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ಉದ್ಯಮಿ ಶ್ರೀಪತಿ ಭಟ್, ಆತ್ಮಕಥನ ನಿರೂಪಕಿ ವಿದ್ಯಾರಶ್ಮಿ ಪೆಲತ್ತಡ್ಕ ಹಾಗೂ ಬೈಪಾಡಿತ್ತಾಯ ದಂಪತಿ ಇದ್ದರು.
ಬೆಳಗ್ಗಿನಿಂದ ಶಿಷ್ಯವೃಂದದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕಿರಿಯ ಹಾಗೂ ಕಿರಿಯ ಶಿಷ್ಯರು ಯಕ್ಷಗಾನದ ನಾದೋತ್ಸವದ ಸುಧೆ ಹರಿಸಿ, ಪ್ರೇಕ್ಷಕರನ್ನು ರಂಜಿಸಿದರು.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಯಕ್ಷ ಗಾನ ಲೀಲಾವಳಿ
ವಿಜಯ ಕರ್ನಾಟಕ ಪುರವಣಿ ವಿಭಾಗದ ಮುಖ್ಯಸ್ಥೆ ವಿದ್ಯಾರಶ್ಮಿ ಪೆಲತ್ತಡ್ಕ ಅವರು ನಾಲ್ಕು ವರ್ಷಗಳಿಂದ ಮಾಹಿತಿ ಸಂಗ್ರಹಿಸಿ ನಿರೂಪಿಸಿರುವ, ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ 'ಯಕ್ಷ ಗಾನಲೀಲಾವಳಿ'. ಸೂಕ್ತ ದಾಖಲೆಗಳಿಲ್ಲದೇ ಇದ್ದ ಆ ಕಾಲದ ಮಾಹಿತಿಯನ್ನೆಲ್ಲ ಹೆಕ್ಕಿತೆಗೆದು, ಗಂಡು ಕಲೆಯಲ್ಲಿ ಹೆಣ್ಣಿನ ಧ್ವನಿ ಮೊಳಗುವಂತೆ ಮಾಡಿದ ಲೀಲಾವತಿ ಬೈಪಾಡಿತ್ತಾಯರ ಸಾಧನೆ, ಕ್ರಾಂತಿ, ಅವರು ಪಟ್ಟ ಶ್ರಮ, ಕಷ್ಟ, ಕುಟುಂಬ ನಿಭಾವಣೆಯೇ ಮೊದಲಾಗಿ, ಜೀವನದ ಏರುಪೇರುಗಳು ಚಿತ್ರಿತವಾಗಿವೆ.
ಶ್ರೀಹರಿಲೀಲಾ-75 ಯಕ್ಷಗಾನ ಕಲಾಯಾನ
ಅಭಿನಂದನ ಗ್ರಂಥವನ್ನು ಗಣರಾಜ ಕುಂಬ್ಳೆ, ರಾಮಕುಂಜ ಅವರ ಪ್ರಧಾನ ಸಂಪಾದಕತ್ವದಲ್ಲಿ ರಚಿಸಲಾಗಿದ್ದು, ಸುಬ್ರಾಯ ಸಂಪಾಜೆ, ಡಾ.ಸಿಬಂತಿ ಪದ್ಮನಾಭ, ಆರತಿ ಪಟ್ರಮೆ ಹಾಗೂ ಅವಿನಾಶ್ ಬೈಪಾಡಿತ್ತಾಯ ಅವರು ಸಂಪಾದಕೀಯ ಮಂಡಳಿಯಲ್ಲಿದ್ದಾರೆ.
29 ಮಂದಿ ಯಕ್ಷಗಾನದ ಅನುಭವೀ ತಜ್ಞರಿಂದ ಯಕ್ಷಗಾನದ ಅಧ್ಯಯನಕ್ಕೆ ಪೂರಕವಾಗುವ ಮಾಹಿತಿಪೂರ್ಣ ಲೇಖನಗಳು ಇದರಲ್ಲಿದ್ದು, ಶಿಷ್ಯರು, ಅಭಿಮಾನಿಗಳು, ಸಹಕಲಾವಿದರು ಬೈಪಾಡಿತ್ತಾಯ ದಂಪತಿಯನ್ನು ಅಭಿನಂದಿಸಿ ಲೇಖನಗಳನ್ನು ಒದಗಿಸಿದ್ದಾರೆ. ಜೊತೆಗೆ, ಬೈಪಾಡಿತ್ತಾಯ ದಂಪತಿಯ ಜೀವನದ ಪ್ರಮುಖ ಘಟ್ಟಗಳ ವಿಶಿಷ್ಟ ಚಿತ್ರ ಸಂಪುಟವೂ ಇದರಲ್ಲಿದೆ. ವೈವಿಧ್ಯಮಯವಾದ, ಯಕ್ಷಗಾನದ ಮೇಲೆ ಬೆಳಕು ಚೆಲ್ಲುವ ವಿಷಯಬದ್ಧ ಲೇಖನಗಳನ್ನು ಈ ಕೆಳಗಿನ ಕಲಾವಿದರು, ಕಲಾಪೋಷಕರು ಬರೆದಿದ್ದಾರೆ:
ಶ್ರೀ ರಮಾನಂದ ಬನಾರಿ
ಶ್ರೀ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಶ್ರೀ ಪದ್ಯಾಣ ಶಂಕರನಾರಾಯಣ ಭಟ್ ಸಂದರ್ಶನ
ಶ್ರೀ ಶ್ರೀನಿವಾಸ ರಾವ್, ಈಶ್ವರಮಂಗಲ
ಶ್ರೀ ನಾರಾಯಣ ಹೆಗಡೆ, ಕಲಾರಂಗ ಉಡುಪಿ
ಶ್ರೀ ಸುಬ್ರಾಯ ಸಂಪಾಜೆ, ಮಡಿಕೇರಿ ಆಕಾಶವಾಣಿ
ಶ್ರೀ ಡಾ.ಪ್ರಭಾಕರ ಜೋಶಿ
ಶ್ರೀ ಎಂ.ಎಲ್.ಸಾಮಗ
ಶ್ರೀ ಡಾ.ಚಂದ್ರಶೇಖರ ದಾಮ್ಲೆ
ಶ್ರೀ ಶ್ರೀಧರ ಡಿ.ಎಸ್
ಶ್ರೀ ಕೆರೆಕೈ ಉಮಾಕಾಂತ ಭಟ್
ಶ್ರೀ ವಾಸುದೇವ ರಂಗಾ ಭಟ್
ಶ್ರೀಮತಿ ವಿದ್ಯಾ ಕೋಳ್ಯೂರು
ಶ್ರೀಮತಿ ಅಶ್ವಿನಿ ಕೊಂಡದಕುಳಿ
ಶ್ರೀ ಶಶಿಕಾಂತ ಶೆಟ್ಟಿ
ಶ್ರೀಮತಿ ನಾಗವೇಣಿ ಮಂಚಿ
ಶ್ರೀಮತಿ ಜಯಲಕ್ಷ್ಮೀ ಕಾರಂತ
ಶ್ರೀ ಕುರಿಯ ಗಣಪತಿ ಶಾಸ್ತ್ರೀ
ಶ್ರೀ ತಾರಾನಾಥ ವರ್ಕಾಡಿ
ಶ್ರೀ ನಾ. ಕಾರಂತ ಪೆರಾಜೆ
ಶ್ರೀ ರವಿಶಂಕರ ವಳಕ್ಕುಂಜ
ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್
ಶ್ರೀ ಶ್ರುತಕೀರ್ತಿ ಜೈನ್
ಶ್ರೀ ಪ್ರೊ. ಶ್ರೀಪತಿ ಕಲ್ಲೂರಾಯ
ಶ್ರೀ ರಾಧಾಕೃಷ್ಣ ಕಲ್ಚಾರ್
ಶ್ರೀ ಡಾ.ಸಿಬಂತಿ ಪದ್ಮನಾಭ
ಶ್ರೀ ಕಟೀಲು ಸಿತ್ಲ ರಂಗನಾಥ ರಾವ್
ಶ್ರೀಮತಿ ಸುಮಂಗಲಾ ರತ್ನಾಕರ್
ಶ್ರೀಮತಿ ಆರತಿ ಪಟ್ರಮೆ
#ShreeHariLeela
Tags:
ಸುದ್ದಿ