ಕೋವಿಡ್ ನಿಯಂತ್ರಣದ ಬಳಿಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ: ಡಾ.ಜಿ.ಎಲ್.ಹೆಗಡೆ

ಡಾ.ಜಿ.ಎಲ್. ಹೆಗಡೆ‌ ಅವರು ಜ.14, 20022ರ ಶುಕ್ರವಾರ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ನಮ್ರತಾ, ಸದಸ್ಯರಾದ ಶ್ರೀನಿವಾಸ ಸಾಸ್ತಾನ, ಕೆ.ಎಂ.ಶೇಖರ, ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋಹನ ಹೆಗಡೆ ಹೆರವಟ್ಟ, ಲೆಕ್ಕಪರಿಶೋಧಕ ಗೋಪಾಲಕೃಷ್ಣ ಹೆಗಡೆ, ಡಾ. ಶ್ರೀಪಾದ ಹುಕ್ಲಮಕ್ಕಿ, ಯಕ್ಷಗಾನ ಸಂಶೋಧಕಿ ಮಮತಾ ಜೋಶಿ ಹಾಗೂ ಉದ್ಯಮಿ ಶಾಂತಾರಾಮ‌ ಭಟ್ಟ ಇದ್ದರು.



ಬೆಂಗಳೂರು: ಯಕ್ಷಗಾನವು ನಮ್ಮ ದೇಶದ ಕಲೆಯಾಗಿ ಹೊರಹೊಮ್ಮಬೇಕು ಎಂದು ಹೇಳಿರುವ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ‌ ಮಣಕಿ, ಅಕಾಡೆಮಿಯ ಕಳೆದ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ‌ ಪ್ರಶಸ್ತಿಯನ್ನು ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಸಚಿವರ ಜೊತೆಗೆ ಚರ್ಚಿಸಿ, ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದರು. 

ಯಕ್ಷಗಾನ ಅಕಾಡೆಮಿಯ ಹೊಸ ಅಧ್ಯಕ್ಷರಾಗಿ ಶುಕ್ರವಾರ (2022 ಜನವರಿ 14) ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಯಕ್ಷಗಾನ ಕಲೆಯು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುತ್ತಿದೆ. ಅದು ದೇಶದ ಕಲೆಯಾಗಬೇಕು. ಜೊತೆಗೆ ಪ್ರಪಂಚದ ಎಲ್ಲೆಡೆ ಈ ಕಲೆ ಪ್ರದರ್ಶನ ಕಾಣುವಂತಾಗಬೇಕು ಎಂದರಲ್ಲದೆ, ಯಕ್ಷಗಾನದ ಮತ್ತೊಂದು ಪ್ರಕಾರವಾದ ಮೂಡಲಪಾಯದ ಏಳಿಗೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. 

ಯಕ್ಷಗಾನದ ವಿಶ್ವಕೋಶ, ಬೆಂಗಳೂರಲ್ಲಿ ಗ್ರಂಥಾಲಯ
ಇದಕ್ಕೆ ಮೊದಲು, ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಶಿರಸಿಯಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗುರುವಾರ ಭೇಟಿ ಮಾಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಯಕ್ಷಗಾನದ ವಿಶ್ವಕೋಶ ವಿಭಾಗ ಸ್ಥಾಪಿಸುವುದು ಮೊದಲ ಆದ್ಯತೆ ಎಂದು ತಿಳಿಸಿದ್ದರು.

ಮಾಧ್ಯಮದವರ ಜತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿ ಕೃತಿಗಳಿರುವ ಬೃಹತ್ ಗ್ರಂಥಾಲಯ ಸ್ಥಾಪಿಸಬೇಕಿದ್ದು, ಅಕಾಡೆಮಿಯು ಈ ನಿಟ್ಟನಲ್ಲಿ ಪ್ರಯತ್ನ ಮಾಡಲಿದೆ ಎಂದರು.

ಯಕ್ಷಗಾನವು ನಿರಂತರವಾಗಿ ಪ್ರದರ್ಶನಗೊಳ್ಳುತ್ತಿದ್ದರೆ ಮಾತ್ರ ಕಲೆ ಉಳಿಯುತ್ತದೆ. ಕಲೆಯನ್ನೇ ನಂಬಿ ಜೀವನ ಸಾಗಿಸುವ ಕಲಾವಿದರಿಗೂ ಪ್ರೋತ್ಸಾಹ ಸಿಗುತ್ತದೆ ಎಂದು ಡಾ.ಜಿ.ಎಲ್.ಹೆಗಡೆ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು