ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ: ಬಹುಶ್ರುತ ವಿದ್ವಾಂಸ, ಯಕ್ಷಗಾನದ ಆಸ್ತಿ

Dr.GL Hegade Yakshagana Academy President
ಡಾ.ಜಿ.ಎಲ್.ಹೆಗಡೆ

ವರ್ಷದಿಂದ ಬರಿದಾಗಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಕೊನೆಗೂ ಜ.12ರಂದು ನೇಮಕಗೊಂಡಿರುವ ಡಾ.ಜಿ.ಎಲ್.ಹೆಗಡೆ ಅವರ ಪೂರ್ಣ ಹೆಸರು ಡಾ. ಗೋಪಾಲಕೃಷ್ಣ ಲಕ್ಷ್ಮೀನಾರಾಯಣ ಹೆಗಡೆ. ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಣಕಿಯವರಾಗಿದ್ದು, ಯಕ್ಷಗಾನ ಕಲಾವಿದರಾಗಿ, ವಿದ್ವಾಂಸರಾಗಿ ಜನಜನಿತರಾಗಿದ್ದಾರೆ. ಯಕ್ಷಗಾನದ ಮೇಲಿನ ಆಸಕ್ತಿ, ಸಂಶೋಧನೆ ಮತ್ತು ಅವರು ಮಾಡಿದ ಸಾಧನೆಯೇ ಅವರಿಗೆ ಈ ಅಧ್ಯಕ್ಷ ಸ್ಥಾನ ಒಲಿಯುವಂತೆ ಮಾಡಿದೆ.

ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಉಪನ್ಯಾಸಕಾರರಾಗಿ ಕೆಲಸ ಮಾಡುತ್ತಿದ್ದ ಅವರು 2019ರಲ್ಲಿ ಸೇವಾನಿವೃತ್ತಿಯಾಗಿದ್ದರು. ಸಂಶೋಧನಾ ಮಾರ್ಗದರ್ಶಕರಾಗಿಯೂ ಕೆಲಸ ಮಾಡಿರುವ ಜಿ.ಎಲ್.ಹೆಗಡೆಯವರು, ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ಮಾರ್ಗದರ್ಶನದಲ್ಲಿ "ಸಮಾಜ ಹಾಲಕ್ಕಿ- ಒಂದು ಅಧ್ಯಯನ" ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. 1983ರಲ್ಲಿ ಸ್ವರ್ಣಪದಕದೊಂದಿಗೆ ಎಂಎ ಪೂರ್ಣಗೊಳಿಸಿದ್ದರೆ, 1989ರಲ್ಲಿ ಬೆಂಗಳೂರು ವಿವಿಯಿಂದ ಪಿಹೆಚ್.ಡಿ ಪುರಸ್ಕೃತರಾಗಿದ್ದಾರೆ.

2010ರಲ್ಲಿ ಯಕ್ಷಗಾನ ಸಂಶೋಧನಾ ಕೇಂದ್ರವನ್ನು ಆರಂಭಿಸಿದ ಅವರು, ಅದರ ಮೂಲಕ ಯಕ್ಷಗಾನ ಸಂಶೋಧನಾ ಪ್ರಬಂಧಗಳ ಪ್ರಕಟಣೆ, ಸಂಶೋಧಕರಿಗೆ ಸನ್ಮಾನ, ಮಾರ್ಗದರ್ಶನ, ಪ್ರಾಚೀನ ಯಕ್ಷಗಾನಗಳ ವಿಡಿಯೊ ದಾಖಲಾತಿ, ಸಂಗ್ರಹಣೆ, ಯಕ್ಷಗಾನ ಕಮ್ಮಟ, ವಿಚಾರ ಸಂಕಿರಣ, ಯಕ್ಷಗಾನ ಪುಸ್ತಕಗಳ ಪ್ರಕಟಣೆ, ಸಾಂಪ್ರದಾಯಿಕ ಯಕ್ಷಗಾನ ಪ್ರಯೋಗ, ಯಕ್ಷಗಾನ ಸಾಹಿತ್ಯಾಸಕ್ತರಿಗಾಗಿ ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ. ಕರ್ಕಿ ಮೇಳದ 8 ಪಾರಂಪರಿಕ ಯಕ್ಷಗಾನ ವಿಡಿಯೊ ದಾಖಲಾತಿಯೊಂದು ಐತಿಹಾಸಿಕ ಸಾಧನೆ. ಅಂತರಂಗದಾ ಮೃದಂಗ, ಹುಕ್ಲಮಕ್ಕಿ ಮೇಳ, ಗೀತಾನುಸಂಧಾನ ಮುಂತಾದ ಪುಸ್ತಕಗಳನ್ನೂ ಪ್ರಕಟಿಸಲಾಗಿದೆ.

ಯಕ್ಷಗಾನ ಪ್ರಸಂಗಕರ್ತರೂ ಆಗಿರುವ ಡಾ.ಜಿ.ಎಲ್.ಹೆಗಡೆ, ಅಂಧಕಾಸುರ ವಧೆ, ಭಾಗವತ ಪಾರಮ್ಯ ಎಂಬ ಪ್ರಸಂಗಗಳನ್ನು ರಚಿಸಿದ್ದಾರೆ. ಅಂಧಕಾಸುರ ವಧೆಯು ಸ್ವಚ್ಛಭಾರತ - ಹಸಿರು ಭಾರತದ ಕಲ್ಪನೆಯಲ್ಲಿ ಮೂಡಿಬಂದಿದ್ದು, ದೆಹಲಿ, ಹೈದರಾಬಾದ್‌ಗಳಲ್ಲಿಯೂ ಪ್ರದರ್ಶನ ಕಂಡಿದೆ.

ಯಕ್ಷಗಾನ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಡಾ.ಹೆಗಡೆ, ಹಾನಗಲ್ ನವೋದಯ ಶಾಲೆ, ಶಿವಮೊಗ್ಗ ನವೋದಯ ಶಾಲೆ ಮತ್ತು ಬಾಳಿಗಾ ಕಾಲೇಜಿನ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿ, ಅವರಿಂದ ಯಕ್ಷಗಾನ ಪ್ರದರ್ಶನ ಮಾಡಿಸಿದ್ದಾರೆ.

ಸುಮಾರು ಐವತ್ತು ವರ್ಷಗಳಿಂದ ಬಯಲಾಟ ಮೇಳಗಳಲ್ಲಿ ಪಾತ್ರಧಾರಿಯಾಗಿ ಮೆರೆದ ಅವರು, ತಾಳಮದ್ದಳೆ ಕ್ಷೇತ್ರದಲ್ಲಿಯೂ ಎತ್ತಿದ ಕೈ. ಕರ್ಕಿ ಮೇಳದಲ್ಲಿ, ಕುಮಟಾ ಗೋವಿಂದ ನಾಯ್ಕರ ಮೇಳದಲ್ಲಿ ಗೆಜ್ಜೆ ಕಟ್ಟಿದ್ದು, ಬಣ್ಣದ ವೇಷ, ಕೌರವ, ಭೀಮ, ಜರಾಸಂಧ, ಬಲರಾಮ, ಇಂದ್ರಜಿತು, ದಶರಥ, ಈಶ್ವರ, ಮಹಿಷಾಸುರ, ಅಂಧಕಾಸುರ, ಕುಂಭಕರ್ಣ, ಹಿರಣ್ಯಕಶಿಪು, ಶುಕ್ರ, ವಿಶ್ವಾಮಿತ್ರ, ದೂರ್ವಾಸ ಮುಂತಾದ ಅನೇಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಯಕ್ಷಗಾನ ಕಂಡ ಶ್ರೇಷ್ಠ ಕಲಾವಿದರಾದ ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರೊಂದಿಗೆ, ಕೆರೆಮನೆ ಮಹಾಬಲ ಹೆಗಡೆ, ಕಡತೋಕ ಭಾಗವತರು, ಪ್ರಭಾಕರ ಜೋಶಿ, ಕೆರೆಮನೆ ಶಂಭು ಹೆಗಡೆ, ಎಂ.ಎಲ್.ಸಾಮಗ, ವಿದ್ವಾನ್ ಉಮಾಕಾಂತ ಭಟ್ಟ ಮುಂತಾದ ನಾಡಿನ ಹಿರಿಯ ಅರ್ಥಧಾರಿಗಳೊಂದಿಗೆ ಅರ್ಥ ಹೇಳಿದ್ದಾರೆ.

ಶೇಣಿ ರಾಮಾಯಣ ಹಾಗೂ ಶೇಣಿ ಭಾರತ ಕೃತಿಗಳನ್ನು ರಚಿಸಿದ್ದು, ಇದು ಯಕ್ಷಗಾನ ಸಾಹಿತ್ಯ ಕ್ಷೇತ್ರದಲ್ಲೊಂದು ವಿಶಿಷ್ಟ ಕೃತಿ. ಶೇಣಿಯವರ ಅರ್ಥಗಾರಿಕೆಯ ವೈಭವ ಇದರಲ್ಲಿದೆ. ಜೊತೆಗೆ, 'ನಮ್ಮ ಚಿಟ್ಟಾಣಿ', ಯಕ್ಷಗಾನ ವರ್ಣ ವೈಭವ ಕೃತಿಗಳೂ ಅವರ ಕೊಡುಗೆಗಳು.

ಡಾ.ಜಿ.ಎಲ್.ಹೆಗಡೆ ಅವರ ಪ್ರಮುಖ ಕೃತಿಗಳು:
ಶೇಣಿ ರಾಮಾಯಣ, ಶೇಣಿ ಭಾರತ, ಯಕ್ಷಗಾನ ವರ್ಣ ವೈಭವ, ಸಂಸ್ಕೃತ ಕಾವ್ಯ ವಿನೋದ, ನಮ್ಮ ಚಿಟ್ಟಾಣಿ (ಚಿಟ್ಟಾಣಿ ರಾಮಚಂದ್ರ ಹೆಗಡೆ ಆತ್ಮಕಥನ), ಪರಮಾನಂದ ಚರಿತೆ, ಚಿನ್ನದ ಕಿರೀಟ (ಅಪ್ರಕಟಿತ).

ಅವರು ದಿಗ್ದರ್ಶಿಸಿದ ನೃತ್ಯರೂಪಕಗಳು: ಶ್ರೀ ರಾಮಾಯಣ ದರ್ಶನ, ಶ್ರೀಕೃಷ್ಣ ತುಲಾಭಾರ, ನಾರೀ ಪಂಚರತ್ನ, ಶ್ರೀನಿವಾಸ ಕಲ್ಯಾಣ, ಮಹಾಲಸಾ ನಾರಾಯಣಿ ಚರಿತೆ, ಮೂಕಾಂಬಿಕಾ ವೈಭವ.

ವಿವಿಧ ಪ್ರಕಾಶನಗಳ ಮೂಲಕ ಇವರ ಸಂಶೋಧನಾ ಲೇಖನಗಳೂ ಪ್ರಕಟಗೊಂಡಿವೆ. ಅವುಗಳಲ್ಲಿ ಪ್ರಮುಖವಾದವು, ಭಾಷಾ ವಿಜ್ಞಾನದ ಹಿನ್ನೆಲೆಯಲ್ಲಿ ಕೇಶಿರಾಜ, ಪತಂಜಲಿ ಯೋಗಸೂತ್ರ, ಕರಾವಳಿಯ ಪ್ರಾಣಿ ಬಲಿ, ಯಕ್ಷಗಾನಕ್ಕೆ ಹವ್ಯಕರ ಕೊಡುಗೆ, ತಾಳಮದದ್ದಳೆಯ ಸೃಜನಶೀಲ ಸಾಧ್ಯತೆಗಳು, ಮೋಹನ ತರಂಗಿಣಿ, ಪ್ರಾಚೀನ ಯಕ್ಷಗಾನ ರಂಗಭೂಮಿ ಮತ್ತು ಶಿಕ್ಷಣ ವಿಧಾನ, ಯಕ್ಷಗಾನ  ರಾಮಾಯಣ ಪ್ರಸಂಗ, ಯಕ್ಷಗಾನದಲ್ಲಿ ಹಾಸ್ಯ, ಕನ್ನಡ ಭಗವದ್ಗೀತೆ, ಯಕ್ಷಗಾನ ಸಂಘಟಕ ಶಂಭು ಹೆಗಡೆ, ಯಕ್ಷಗಾನದಲ್ಲಿ ರೌದ್ರರಸ, ಯಕ್ಷಗಾನ ತರ್ಕಪ್ರಧಾನ, ತಾಳಮದ್ದಳೆ- ಒಂದು ಅವಲೋಕನ... ಇತ್ಯಾದಿ.

ಶೇಣಿಯವರೊಂದಿಗೆ 20ಕ್ಕೂ ಹೆಚ್ಚು ತಾಳಮದ್ದಳೆ ಕ್ಯಾಸೆಟ್‌ಗಳಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಟಿವಿಯಲ್ಲಿ ಸಂದರ್ಶನಗಳಲ್ಲಿ ಭಾಗವಹಿಸಿದ್ದಾರೆ. ರೇಡಿಯೋ ಚಿಂತನೆ, ಧಾರವಾಹಿಗಳಿಗಾಗಿ (ಸಾವಿರದ ಶರಣವ್ವ, ಕನ್ನಡದ ತಾಯಿ) ಸಂಭಾಷಣೆ ಮುಂತಾದವು ಅವರ ಇನ್ನಷ್ಟು ಸಾಧನೆಗಳು.

ಕಡ್ಲಿಮಟ್ಟಿ ಸ್ಟೇಶನ್ ಮಾಸ್ಟರ್, ಶ್ರೀಕೃಷ್ಣ ದೇವರಾಯ, ವಾಲ್ಮೀಕಿ, ರಾಜಾ ಹರಿಶ್ಚಂದ್ರ ಮುಂತಾದ ನಾಟಕಗಳನ್ನೂ ಅವರು ನಿರ್ದೇಶಿಸಿ ನಟಿಸಿದ್ದಾರೆ. ಗೀತರಾಮಾಯಣದ ವ್ಯಾಖ್ಯಾನಕಾರರಾಗಿ, ಭಾಷಣಕಾರರಾಗಿ, ಗಮಕ ವ್ಯಾಖ್ಯಾನಕಾರರಾಗಿ ಪ್ರಸಿದ್ಧಿ ಪಡೆದಿರುವ ಅವರು, ಪರಮೇಶಿ ಪ್ರೇಮ ಪ್ರಸಂಗ, ನಮ್ಮೂರ ಮಂದಾರ ಹೂವೆ, ಮಾನಸ ಮಂದಾರ, ಸಾವಿರಣದ ಶರಣವ್ವ, ಮೌನಿ ಮುಂತಾದ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟರಾಗಿಯೂ ಗುರುತಿಸಿಕೊಂಡಿದ್ದಾರೆ.

2019ರ ಶೇಣಿ ಪ್ರಶಸ್ತಿ, ಶೇಣಿ ಶತಮಾನೋತ್ಸವ ಪ್ರಶಸ್ತಿ ಮುಂತಾದ ಹಲವು ಗೌರವಗಳನ್ನು ಪಡೆದಿರುವ ಅವರು, ಕುಮಟಾ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಶೇಣಿಯವರೇ ಗೋಪಾಲಕೃಷ್ಣ ಹೆಗಡೆಯವರ ಬಗ್ಗೆ ತಮ್ಮ ಶಿಷ್ಯನೆಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ.

ಇಂಥಹ ಬಹುಶ್ರುತ ಪಂಡಿತ, ಯಕ್ಷಗಾನದ ಆಸ್ತಿಯಾಗಿರುವ ಡಾ.ಗೋಪಾಲಕೃಷ್ಣ ಲಕ್ಷ್ಮೀನಾರಾಯಣ ಹೆಗಡೆ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷತೆಗೆ ಅರ್ಹವಾಗಿಯೇ ಆಯ್ಕೆಯಾಗಿದ್ದಾರೆ. ಅವರಿಗೆ ಯಕ್ಷಗಾನ ಡಾಟ್ ಇನ್ ಪರವಾಗಿ ಅಭಿನಂದನೆಗಳು ಮತ್ತು ಶುಭಾಶಯಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು