ಅಕಾಡೆಮಿ ಪ್ರಶಸ್ತಿ ಪ್ರದಾನ | ಕರಾವಳಿಯಲ್ಲೇ ಯಕ್ಷಗಾನ ಸಮ್ಮೇಳನ: ಸಚಿವ ಸುನಿಲ್ ಕುಮಾರ್

ಕಬ್ಬಿನಾಲೆ ವಸಂತ ಭಾರಧ್ವಾಜರಿಗೆ ಅಕಾಡೆಮಿಯ ಪ್ರತಿಷ್ಠಿತ ಪಾರ್ತಿಸುಬ್ಬ ಪುರಸ್ಕಾರ ಪ್ರದಾನ ಮಾಡಲಾಯಿತು.

ಕಾರ್ಕಳ: ಕರ್ನಾಟಕವು ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಇತರ ರಾಜ್ಯಗಳಿಗೇ ಮುಂದಾಳುತ್ವ ವಹಿಸಬೇಕಿದ್ದು, ಇದಕ್ಕೆ ಪೂರಕವಾದ ಪ್ರಯತ್ನವನ್ನು ಎಲ್ಲ ಕ್ಷೇತ್ರಗಳಲ್ಲೂ ಮಾಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಶುಕ್ರವಾರ (ಏ.1, 2022) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಕೊಡಮಾಡುವ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬೆಂಗಳೂರು ಕೇಂದ್ರಿತ ಕಾರ್ಯಕ್ರಮಗಳನ್ನು ಬದಲಾಯಿಸಿ, ರಾಜ್ಯದ ಬೇರೆಡೆಯೂ ನಡೆಸಲಾಗುತ್ತಿದೆ. ಮುಂದಿನ ವಾರ ಕೋಲಾರದಲ್ಲಿ ಜಾನಪದ ಅಕಾಡೆಮಿಯ ಕಾರ್ಯಕ್ರಮ ನಡೆಯಲಿದೆ. ಕಾರ್ಕಳ ಉತ್ಸವದ ಮೂಲಕ ಕಾರ್ಕಳದ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗಿತ್ತು. ಪಾರ್ತಿಸುಬ್ಬ ಪ್ರಶಸ್ತಿಯನ್ನು ಪಡೆದ ವಸಂತ ಭಾರದ್ವಾಜ್ ಅವರು ಕಾರ್ಕಳದವರು ಎನ್ನುವ ಕಾರಣಕ್ಕೆ ಹಿರಿಮೆ ಮತ್ತಷ್ಟು ಜಾಸ್ತಿಯಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಯಕ್ಷಗಾನವನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಕಾರ್ಯ
ಸಾಹಿತ್ಯ ಸಂಗೀತ ಹಾಗೂ ಸಂಸ್ಕೃತಿಯಲ್ಲಿ ಕರ್ನಾಟಕವು ಬೇರೆ ರಾಜ್ಯಗಳಿಗಿಂತ ಮುಂದಿದೆ ಎಂದ ಅವರು, ಯಕ್ಷಗಾನವು ಪ್ರಶಸ್ತಿಯಿಂದ ಬೆಳೆಯುವುದಕ್ಕಿಂತ ಜನರ ನಿರಂತರ ಭಾಗವಹಿಸುವಿಕೆ, ಜನರ ಪ್ರೀತಿ, ಆರಾಧನೆಗಳಿಂದ ಬೆಳೆದುಕೊಂಡು ಬಂದಿದೆ. ಆದರೆ, ಇದನ್ನು ಹೊಸ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಆಗಬೇಕಾಗಿದೆ. ಯಕ್ಷಗಾನ ಮತ್ತು ನಾಟಕ ಎರಡೂ ಜೊತೆಯಾಗಿ ಬೆಳೆಯಬೇಕು. ಯುವಕರನ್ನು ಅದರಲ್ಲಿ ತೊಡಗಿಸಬೇಕು ಎಂಬ ಕಲ್ಪನೆಯಿಂದ ಮೂರು ಜಿಲ್ಲೆಗಳಿಗೆ ಸಂಬಂಧಿಸಿ ಕಾರ್ಕಳದಲ್ಲಿ ಯಕ್ಷರಂಗಾಯಣಕ್ಕೆ ಚಾಲನೆ ನೀಡಲಾಗಿದೆ ಎಂದವರು ಹೇಳಿದರು.

ಇದೇ ವೇಳೆ, ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನವನ್ನು ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಪರಿಸರದಲ್ಲೇ ಅದನ್ನು ನಡೆಸಲಾಗುವುದು. ಮುಂದಿನ ವರ್ಷದಿಂದ ‘ದೊಡ್ಡ ಪರಮಯ್ಯ’ ಎಂಬ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿಯನ್ನು ಉತ್ತರ ಕರ್ನಾಟಕದ ಹಾಸ್ಯಗಾರ ಕುಟುಂಬಕ್ಕೆ ನೀಡಲು ಚಿಂತನೆ ನಡೆದಿದೆ ಎಂದೂ ಮಾಹಿತಿ ನೀಡಿದರು.

ಅಮೃತ ಭಾರತಿಗೆ ಕನ್ನಡದಾರತಿ
ಸಂಸ್ಕೃತಿ ಇಲಾಖೆಯು ಎಲ್ಲ ಅಕಾಡೆಮಿಗಳ ಮೂಲಕ ಮುಂದಿನ ದಿನಗಳಲ್ಲಿ ಹೊಸ ರೀತಿಯ ಪರಿಕಲ್ಪನೆಗಳನ್ನು ಇಟ್ಟುಕೊಂಡು ಕಾರ್ಯಕ್ರಮ ನಡೆಸಲು ಪ್ರಯತ್ನಿಸುತ್ತಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಘೋಷಣೆಯ ಮೂಲಕ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಾಗುವುದು. ಕರ್ನಾಟಕದ ಸಾಂಸ್ಕೃತಿಕ ಸಂಗತಿಗಳು ಇಡೀ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಯಾವ ರೀತಿಯ ಕೊಡುಗೆಗಳನ್ನು ನೀಡಿವೆ ಎನ್ನುವುದನ್ನು ಪರಿಚಯಿಸುವ ಅಭಿಯಾನದ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಮಕ್ಕಳಿಗೆ ಆಸಕ್ತಿ ಮೂಡಿಸಲು ಬರಹಗಾರರ ಸಮ್ಮೇಳನ ನಡೆಸಲಾಗುವುದು. ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಗೆ ಸಂಬಂಧಿಸಿ ರಾಜ್ಯದ ಎಲ್ಲ ಕಡೆ ಜಿಲ್ಲಾ ಉತ್ಸವಗಳನ್ನು ನಡೆಸಲಾಗುವುದು ಎಂದರು.

ಮೂಡುಬಿದಿರೆ ಜೈನ ಮಠದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ‘ಪ್ರಶಸ್ತಿ ಪುರಸ್ಕೃತರ ಸಾಧನೆ ದೊಡ್ಡದು. ಕಾರ್ಕಳದಂತಹ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಅಭಿಮಾನ ತಂದಿದೆ’ ಎಂದರು.

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಕುಮಟಾ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸದಸ್ಯ ಶ್ರೀನಿವಾಸ ಸಾಸ್ತಾನ ಸ್ವಾಗತಿಸಿದರು. ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದಸ್ಯರಾದ ನವನೀತ ಶೆಟ್ಟಿ ಕದ್ರಿ, ಮಾಧವ ಭಂಡಾರಿ, ಆರತಿ ಪಟ್ರಮೆ, ರಮೇಶ್ ಬೇಗಾರ್, ದಿವಾಕರ ಹೆಗಡೆ, ಯೋಗೀಶ್ ರಾವ್ ಚಿಗುರು ಪಾದೆ, ಜಿ.ಎಸ್.ಭಟ್ಟ, ನಿರ್ಮಲಾ ಹೆಗಡೆ, ಎಂ.ದಾಮೋದರ ಶೆಟ್ಟಿ, ಮುನಿ ರೆಡ್ಡಿ ಪಿ, ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ಇವರು ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.

ಅಕಾಡೆಮಿ ಸದಸ್ಯ ಕೆ.ಎಂ.ಶೇಖರ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ.ಶಿವಾನಂದ ಪೈ, ಪ್ರಾಂಶುಪಾಲ ಡಾ.ಮಂಜುನಾಥ್ ಎ. ಕೋಟ್ಯಾನ್, ಯಕ್ಷರಂಗಾಯಣ ಕಾರ್ಕಳದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಸ್.ಆರ್.ಅರುಣ ಕುಮಾರ್ ಇದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಲ್ಯ ಸಾರಥ್ಯ ಯಕ್ಷಗಾನ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಹಾಗೂ ಪಾರಿಜಾ-ನರಕಾಸುರ ಪ್ರಸಂಗವು ಯಕ್ಷಗಾನ ಬಯಲಾಟ ರೂಪದಲ್ಲಿ ಪ್ರದರ್ಶನಗೊಂಡಿತು.

ಕಾರ್ಯಕ್ರಮದ ನೇರಪ್ರಸಾರವು ಯಕ್ಷಗಾನ ಅಕಾಡೆಮಿ ಫೇಸ್ಬುಕ್ ಪುಟದಲ್ಲಿ ಇಲ್ಲಿದೆ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು