ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಪ್ರಸಂಗಕರ್ತ ಹಾಗೂ ಯಕ್ಷಗಾನ ಗುರು ಗಣೇಶ ಕೊಲೆಕಾಡಿ ಆಯ್ಕೆಯಾಗಿದ್ದಾರೆ. ‘ಪಾರ್ತಿಸುಬ್ಬ ಪ್ರಶಸ್ತಿ’ಯು ₹ 1 ಲಕ್ಷ ನಗದು ಒಳಗೊಂಡಿದೆ. ಯಕ್ಷಗಾನ ಅಕಾಡೆಮಿ ಗೌರವ ಪುರಸ್ಕಾರಕ್ಕೆ ತೆಂಕು, ಬಡಗು, ಮೂಡಲಪಾಯದ ಐದು ಮಂದಿ ಭಾಗವತರೇ ಆಯ್ಕೆಯಾಗಿರುವುದು ಈ ಬಾರಿಯ ಪ್ರಶಸ್ತಿಯ ವಿಶೇಷ.
ಪುತ್ತಿಗೆ ರಘುರಾಮ ಹೊಳ್ಳ, ಪಟ್ಲ ಸತೀಶ್ ಶೆಟ್ಟಿ, ಕೆ.ಪಿ.ಹೆಗಡೆ, ಕವ್ವಾಳೆ ಗಣಪತಿ ಭಾಗವತ ಮುಂತಾದ ಖ್ಯಾತನಾಮರಿಗೆ ಅಕಾಡೆಮಿ ಪ್ರಶಸ್ತಿಗಳು ಒಲಿದಿದ್ದು, ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ 'ಯಕ್ಷ ಗಾನ ಲೀಲಾವಳಿ' ನಿರೂಪಿಸಿದ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ ಪುಸ್ತಕ ಗೌರವ ದೊರೆತಿದೆ.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ.
ಬೆಂಗಳೂರಿನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಜಿ.ಎಲ್. ಹೆಗಡೆ ಅವರು ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು. ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಇದ್ದರು.
2022ನೇ ಸಾಲಿನ ಯಕ್ಷಗಾನ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು:
- ತೆಂಕುತಿಟ್ಟಿನ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ (ಮಂಗಳೂರು)
- ತೆಂಕುತಿಟ್ಟು ಭಾಗವತ ಪಟ್ಲ ಸತೀಶ್ ಶೆಟ್ಟಿ (ಮಂಗಳೂರು)
- ಮೂಡಲಪಾಯ ಯಕ್ಷಗಾನ ಭಾಗವತ ಹಾಗೂ ಕಲಾವಿದ ಭಾಗವತ ಚಂದಯ್ಯ (ತುಮಕೂರು)
- ಭಾಗವತ ಹಾಗೂ ಪಾರಂಪರಿಕ ಯಕ್ಷಗಾನ ಕಲಾವಿದ ಭಾಗವತ ಉಮೇಶ ಭಟ್ ಬಾಡ (ಉತ್ತರ ಕನ್ನಡ)
- ಭಾಗವತ ಹಾಗೂ ಬಡಗುತಿಟ್ಟು ಯಕ್ಷಗಾನ ಕಲಾವಿದ ಕೆ.ಪಿ. ಹೆಗಡೆ (ಉಡುಪಿ)
ಈ ಪ್ರಶಸ್ತಿಗಳು ತಲಾ ₹50 ಸಾವಿರ ನಗದು ಒಳಗೊಂಡಿವೆ.
‘ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಪ್ರಶಸ್ತಿ’ಗೆ ಪಾರಂಪರಿಕ ಯಕ್ಷಗಾನ ಕಲಾವಿದ ಹುಕ್ಕಲಮಕ್ಕಿ ಕಮಲಾಕರ ಹೆಗಡೆ (ಉತ್ತರ ಕನ್ನಡ) ಭಾಜನರಾಗಿದ್ದಾರೆ. ಈ ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿವೆ.
ಪುಸ್ತಕ ಬಹುಮಾನ
2021ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಮಂಗಳೂರಿನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ ಅವರ ‘ಯಕ್ಷಗಾನ ಪ್ರಸಂಗ ಸಂಪುಟ’, ಬೆಳಗಾವಿಯ ಎಲ್.ಎಸ್. ಶಾಸ್ತ್ರಿ ಅವರ ‘ಯಕ್ಷಗಾನ ನಕ್ಷತ್ರಗಳು’ ಹಾಗೂ ಬೆಂಗಳೂರಿನ ವಿದ್ಯಾರಶ್ಮಿ ಪೆಲತ್ತಡ್ಕ ಅವರು ನಿರೂಪಿಸಿದ ಲೀಲಾವತಿ ಬೈಪಾಡಿತ್ತಾಯರ ಆತ್ಮಕಥನ ‘ಯಕ್ಷ ಗಾನ ಲೀಲಾವಳಿ’ ಕೃತಿಗಳು ಆಯ್ಕೆಯಾಗಿವೆ. ಈ ಬಹುಮಾನಗಳು ತಲಾ ₹25 ಸಾವಿರ ನಗದು ಒಳಗೊಂಡಿವೆ.
ಕಮಲಶಿಲೆಯಲ್ಲಿ ಪ್ರಶಸ್ತಿ ಪ್ರದಾನ
‘ಪಾರ್ತಿಸುಬ್ಬ ಸೇರಿ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳ ಪ್ರದಾನ ಸಮಾರಂಭವು ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಉಡುಪಿಯ ಕಮಲಶಿಲೆಯಲ್ಲಿ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಜಿ.ಎಲ್. ಹೆಗಡೆ ತಿಳಿಸಿದರು.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾದವರು:
- ಕೋಲ್ಯಾರು ರಾಜು ಶೆಟ್ಟಿ, ಹೊರನಾಡು ಕನ್ನಡಿಗ, ಯಕ್ಷಗಾನ ಕಲಾವಿದ
- ಕೃಷ್ಣ (ಕುಷ್ಟ) ಗಾಣಿಗ ಕೋಡಿ, ಕುಂದಾಪುರ ಉಡುಪಿ; ಬಡಗುತಿಟ್ಟು ಯಕ್ಷಗಾನ ಕಲಾವಿದ
- ಕೃಷ್ಣನಾಯ್ಕ ಜಿ. ಬೇಡ್ಕಣಿ, ಉತ್ತರ ಕನ್ನಡ; ಬಡಾಬಡಗು ಯಕ್ಷಗಾನ ಕಲಾವಿದ
- ಶುಭಾನಂದ ಶೆಟ್ಟಿ, ಕಾಸರಗೋಡು; ತೆಂಕುತಿಟ್ಟು ಯಕ್ಷಗಾನ ಕಲಾವಿದ
- ಬಾಲಕೃಷ್ಣ ನಾಯಕ್, ಉಡುಪಿ; ಬಡಗುತಿಟ್ಟು ಯಕ್ಷಗಾನ ಪ್ರಸಾಧನ ಕಲಾವಿದ
- ಕವ್ವಾಳೆ ಗಣಪತಿ ಭಾಗವತ, ಉತ್ತರ ಕನ್ನಡ; ಬಡಾಬಡಗು ಯಕ್ಷಗಾನ ಕಲಾವಿದ
- ಎಸ್.ಪಿ. ಅಪ್ಪಯ್ಯ, ಬೆಂಗಳೂರು; ಮೂಡಲಪಾಯ ಯಕ್ಷಗಾನ ಕಲಾವಿದ
- ಡಿ. ಭೀಮಯ್ಯ, ತುಮಕೂರು; ಮೂಡಲಪಾಯ ಯಕ್ಷಗಾನ ಕಲಾವಿದ
- ಕೊಲ್ಲೂರು ಕೊಗ್ಗ ಆಚಾರ್ಯ, ಉಡುಪಿ; ಬಡಗುತಿಟ್ಟು ಯಕ್ಷಗಾನ ಹಿಮ್ಮೇಳ ಕಲಾವಿದ
- ಅಜಿತ್ ಕುಮಾರ್ ಜೈನ್, ಕಾರ್ಕಳ; ತೆಂಕುತಿಟ್ಟು ಯಕ್ಷಗಾನ ಗುರು, ಕಲಾವಿದ
Tags:
ಸುದ್ದಿ