ರಾಮಾಯಣಕ್ಕೆ ಮೂಲ ಕಾರಣ ಎಂದು ಹೇಳಲಾಗುತ್ತಿರುವ ಮಂಥರೆಯೇ ಈ ತಾಯಿಯಿಂದ ದೂರವಾದ ಕೈಕೇಯಿಯನ್ನು ಸಲಹಿದವಳು. ಅಂಥವಳ ಮೂಲಕ ಬೆಳೆದ ಕೈಕೇಯಿಯ ಹಠಮಾರಿತನದಿಂದ ರಾಮಾಯಣವೇ ನಡೆಯಿತು.
ಕೈಕೇಯಿ ಕೇಕಯ ದೇಶದ ರಾಜಕುಮಾರಿ. ರಾಮಾಯಣದಲ್ಲಿ ಬರುವ ಮಹಿಳಾ ಪಾತ್ರ. ರಾಮಾಯಣ ಕಥೆಯಲ್ಲಿ ದಶರಥ ಮಹಾರಾಜನ ಮೂರನೇ ಪತ್ನಿ. ದಶರಥನಿಗೆ ಕೌಸಲ್ಯೆ ಹಾಗೂ ಸುಮಿತ್ರೆ ಎಂಬ ಇತರ ಎರಡು ಪತ್ನಿಯರೂ ಇದ್ದರು. ಕೈಕೇಯಿಯ ಮಗನೇ ಭರತ.
ಕೈಕೇಯಿ ಕೇಕೆಯ ದೇಶದ ಅಶ್ವಪತಿ ರಾಜನ ಮಗಳು. ಏಳು ಜನ ಅಣ್ಣಂದಿರ ನಡುವೆ ಬೆಳೆದ ಹೆಣ್ಣುಮಗಳು. ಗಂಡುಹುಡುಗರ ನಡುವೆ ಬೆಳೆದ ಇವಳು ಸುಂದರಿಯಾದರೂ ಹೆಣ್ಣಿನ ನಾಜೂಕುತನಕ್ಕಿಂತ ಗಂಡಿನ ಒರಟುತನವನ್ನು ಬೆಳೆಸಿಕೊಂಡಿದ್ದಳು. ಚಿಕ್ಕಂದಿನಿಂದ ಇವಳಿಗೆ ಯುದ್ಧಕಲೆಯಲ್ಲಿ ಆಸಕ್ತಿ. ಕತ್ತಿವರಸೆ, ಧನುರ್ವಿದ್ಯೆಯಲ್ಲಿ ಕೈಕೇಯಿ ನಿಷ್ಣಾತಳಾಗಿದ್ದಳು. ಅವಳು ಬಹಳ ಒಳ್ಳೆಯ ಸಾರಥಿಯೂ ಹೌದು.
ಆದರೆ, ಕೈಕೇಯಿ ಯುದ್ಧಕಲೆಯಲ್ಲಿ ಎಷ್ಟು ಪರಿಣಿತಳೋ ಅಷ್ಟೇ ಹಠಮಾರಿ ಸಹಾ ಆಗಿದ್ದಳು. ತಾನು ಹೇಳಿದ್ದು ಶತಾಯ ಗತಾಯ ಆಗಲೇಬೇಕೆಂಬ ಹಠ ಅವಳಲ್ಲಿತ್ತು. ತಾಯಿಯಿಲ್ಲದ ಅವಳನ್ನು ಅಂತಃಪುರದ ದಾಸಿ ಮಂಥರೆಯೇ ಪೋಷಣೆ ಮಾಡಿದ್ದಳು. ಹೀಗಾಗಿ ಮಂಥರೆಗೆ ಇವಳ ಬಳಿ ಸಲುಗೆ ಮತ್ತು ಕೈಕೇಯಿಗೆ ಮಂಥರೆಯಲ್ಲಿ ತಾಯಿಯಷ್ಟೇ ಮಮತೆ.
ಅಶ್ವಪತಿ ಮಹಾರಾಜ ಒಮ್ಮೆ ಯಾವುದೋ ಯುದ್ಧಕ್ಕೆ ದಶರಥನ ಸಹಾಯ ಬೇಡಿರುತ್ತಾನೆ. ಆಗ ಯುದ್ಧಭೂಮಿಯಲ್ಲಿ ದಶರಥನಿಗೆ ಕೈಕೇಯಿ ಸಹಾಯಕಳಾಗಿರುತ್ತಾಳೆ. ಯುದ್ಧಕಲೆಯಲ್ಲಿ ಇವಳ ನಿಪುಣತೆಯನ್ನು ಮೆಚ್ಚಿದ ದಶರಥ ಇವಳನ್ನು ತನ್ನ ರಾಣಿಯನ್ನಾಗಿ ಮಾಡಿಕೊಳ್ಳುತ್ತಾನೆ.
ಶಂಬರಾಸುರನೆಂಬ ರಾಕ್ಷಸ, ದಶರಥನಿಗೂ ದೇವತೆಗಳ ರಾಜ ದೇವೇಂದ್ರನಿಗೂ ಶತ್ರುವಾಗಿರುತ್ತಾನೆ. ಇವನನ್ನು ಸಂಹರಿಸಲು ದೇವೇಂದ್ರನು ದಶರಥನ ಸಹಾಯ ಕೋರುತ್ತಾನೆ. ದಶರಥನ ಜೊತೆ ಯುದ್ಧಕ್ಕೆ ಕೈಕೇಯಿಯೂ ಹೊರಡುತ್ತಾಳೆ. ಯುದ್ಧದಲ್ಲಿ ಕೈಕೇಯಿ ದಶರಥನ ರಥಕ್ಕೆ ಸಾರಥಿಯಾಗಿರುತ್ತಾಳೆ. ಬಹಳ ತೀವ್ರವಾದ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಶಂಬರಾಸುರನ ಬಾಣಗಳಿಂದ ಗಾಯಗೊಂಡ ದಶರಥ ಎಚ್ಚರ ತಪ್ಪುತ್ತಾನೆ. ಕೈಕೇಯಿ ಜಾಣತನದಿಂದ ರಥವನ್ನು ಸುರಕ್ಷಿತವಾದ ಸ್ಥಳಕ್ಕೆ ಕೊಂಡೊಯ್ದು ಗಾಯಗಳಿಂದ ಖತಿಗೊಂಡ ದಶರಥನಿಗೆ ಶೈತ್ಯೋಪಚಾರ ಮಾಡುತ್ತಾಳೆ.
ಎಚ್ಚರಗೊಂಡ ದಶರಥ ಕೈಕೇಯಿಯ ಧೈರ್ಯ ಸ್ಥೈರ್ಯಗಳನ್ನು ಮೆಚ್ಚಿ ಅವಳಿಗೆ ಎರಡು ವರಗಳನ್ನು ಕೊಡುತ್ತಾನೆ. ಆದರೆ ಕೈಕೇಯಿ ಆಗ ಆ ಎರಡು ವರಗಳನ್ನು ಉಪಯೋಗಿಸದೆ, ತನಗೆ ಬೇಕಾದಾಗ ತೆಗೆದುಕೊಳ್ಳುತ್ತೇನೆಂದು ಹೇಳುತ್ತಾಳೆ. ಯಾವಾಗ ಅಗತ್ಯವಿದ್ದರೂ ಕೇಳಿ ವರಗಳ ಉಪಯೋಗ ಪಡೆದುಕೊಳ್ಳಬಹುದು ಎಂದು ದಶರಥ ವಚನ ಕೊಡುತ್ತಾನೆ.
ಮಂಥರೆಯ ಕುಪಿತ ಭೋದನೆ
ಕಾಲಾನಂತರದಲ್ಲಿ ದಶರಥನಿಗೆ ಕೌಸಲ್ಯೆಯಿಂದ ರಾಮ, ಸುಮಿತ್ರೆಯಿಂದ ಲಕ್ಷ್ಮಣ, ಶತ್ರುಘ್ನ, ಕೈಕೇಯಿಯಿಂದ ಭರತ ಜನಿಸುತ್ತಾರೆ. ಮಕ್ಕಳು ಪ್ರಾಪ್ತವಯಸ್ಕರಾದಾಗ ಅವರಿಗೆ ವಿದೇಹ ರಾಜ್ಯದ ಜನಕ ಮಹಾರಾಜನ ಮಕ್ಕಳಾದ ಸೀತೆ, ಊರ್ಮಿಳೆ, ಮಾಂಡವಿ, ಶ್ರುತಕೀರ್ತಿಯರೊಡನೆ ವಿವಾಹವಾಗುತ್ತದೆ.
ಬಳಿಕ ದಶರಥನು, ತನ್ನ ಹಿರಿಯ ಮಗ ರಾಮನಿಗೆ ಪಟ್ಟಾಭಿಷೇಕ ಮಾಡಲು ಯೋಚಿಸುತ್ತಾನೆ. ಇದನ್ನು ತಿಳಿದ ಮಂಥರೆ ಕೈಕೇಯಿಗೆ ಅವಳು ರಾಜನ ಬಳಿ ಪಡೆದಿದ್ದ ವರಗಳನ್ನು ನೆನಪಿಸಿ, ಈಗ ಆ ವರಗಳನ್ನು ತನ್ನ ಸ್ವಾರ್ಥಕ್ಕಾಗಿ ಕೇಳಲು ಪ್ರೇರೇಪಿಸುತ್ತಾಳೆ. ಅದರಂತೆ ಕೈಕೇಯಿ ದಶರಥನ ಬಳಿ ರಾಮನು ಹದಿನಾಲ್ಕು ವರ್ಷ ಕಾಡಿಗೆ ಹೋಗಬೇಕೆಂದೂ, ತನ್ನ ಮಗ ಭರತನಿಗೆ ಪಟ್ಟಾಭಿಷೇಕ ಮಾಡಬೇಕೆಂದೂ ಆಗ್ರಹಪಡಿಸುತ್ತಾಳೆ. ವಚನ ಭ್ರಷ್ಟನಾಗಲು ಇಚ್ಛೆಯಿಲ್ಲದ ರಾಜನು ರಾಮನನ್ನು ಕಾಡಿಗೆ ಕಳುಹಿಸಿ ಅದೇ ಕೊರಗಿನಲ್ಲಿ ಅಸುನೀಗುತ್ತಾನೆ. ರಾಮಾಯಣದಲ್ಲಿ ಮಂಥರೆಯಿಂದಾಗಿ ಕೈಕೇಯಿ ಖಳನಾಯಕಿಯಾಗಿಯೇ ಉಳಿಯುವಂತಾಯ್ತು.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ