ಲೀಲಾವತಿ ಬೈಪಾಡಿತ್ತಾಯ: ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಏಕೈಕ ಮಹಿಳೆ



Leela Baipadithaya
ತೆಂಕುತಿಟ್ಟು ಯಕ್ಷಗಾನದ ತವರೂರು ಮಧೂರು. ಅಂಥದ್ದೊಂದು ಸುಂದರವಾದ ಪರಿಸರದಲ್ಲೇ ಹುಟ್ಟಿ ಬೆಳೆದ ಶ್ರೀಮತಿ ಲೀಲಾ (ಲೀಲಾವತಿ) ಬೈಪಾಡಿತ್ತಾಯರು (23 ಮೇ 1947ರಿಂದ 14 ಡಿಸೆಂಬರ್ 2024) ಸರಿ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು. 2023 ಇಸವಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರು.

ಲೀಲಾವತಿ ಬೈಪಾಡಿತ್ತಾಯರು 2024 ಡಿಸೆಂಬರ್ 14ರ ದುರ್ದಿನದಂದು, ಅಲ್ಪಕಾಲದ ಅನಾರೋಗ್ಯದ ಬಳಿಕ, ಬಜಪೆ ಸಮೀಪದ ಕೊಳಂಬೆ ಗ್ರಾಮದ ತಲಕಳ ಎಂಬಲ್ಲಿ ತಾವೇ ಇಷ್ಟಪಟ್ಟು ಕಟ್ಟಿಸಿದ ಮನೆಯಲ್ಲಿ ಯಕ್ಷ ಕಲಾಮಾತೆಯ ಪಾದ ಸೇರಿದರು.
 
ಸಾಮಾಜಿಕ ಪ್ರೋತ್ಸಾಹವಾಗಲೀ, ಮಾಧ್ಯಮಗಳ ಪ್ರಚಾರವಾಗಲೀ ಇಲ್ಲದ ಕಾಲದಲ್ಲೇ ಅವರು ಪುರುಷ ಪ್ರಧಾನ ಕಲೆಯಲ್ಲಿ ಬೆಳೆದ ಬಗೆ ಅದ್ಭುತ. ಲೀಲಾವತಿ ಬೈಪಾಡಿತ್ತಾಯರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿ 2010ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ, 2012ರಲ್ಲಿ ಕರ್ನಾಟಕ ಸರಕಾರ ಕೊಡಮಾಡಿದ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. ರಾಣಿ ಅಬ್ಬಕ್ಕ ಪುರಸ್ಕಾರ, ವಿಶ್ವ ತುಳು ಸಮ್ಮೇಳನ ಗೌರವ, ಅಗರಿ ಪ್ರಶಸ್ತಿ, ಸುಳ್ಯದ ರಂಗಮನೆ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಮಂಗಳೂರು ವಿವಿಯ ಯಕ್ಷ ಮಂಗಳಾ ಪ್ರಶಸ್ತಿ, ಉಡುಪಿ ಕಲಾರಂಗ ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಜತೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆಯಾಗಿಯೂ ಅವರು ಕೆಲ ಕಾಲ ಕೆಲಸ ಮಾಡಿದ್ದಾರೆ.

ಪರಂಪರೆಯ ಹಾಡುಗಾರಿಕೆಗೆ ಹೆಸರಾದ ಅವರು, ಇತ್ತೀಚಿನ ದಿನಗಳ ಯಕ್ಷಗಾನ ಗಾನವೈಭವದಲ್ಲಿಯೂ ಕೂಡ ಎಂದಿಗೂ ಯಕ್ಷಗಾನೀಯತೆ ಬಿಟ್ಟುಕೊಡದೆ ಹಾಡುತ್ತಿದ್ದುದು ವಿಶೇಷ.

ಅವರಿಗೆ 75 ತುಂಬಿದ ಸಂದರ್ಭದಲ್ಲಿ, ಪತಿಯೊಂದಿಗೆ ಅವರನ್ನು ಶಿಷ್ಯರೆಲ್ಲ ಸೇರಿಕೊಂಡು ಶ್ರೀ ಹರಿಲೀಲಾ-75 ಯಕ್ಷಾಭಿನಂದನಂ, ಶಿಷ್ಯಾಭಿವಂದನಂ, ಯಕ್ಷನಾದೋತ್ಸವಂ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಿ ಗೌರವಿಸಿರುವುದು ಇತಿಹಾಸ. 

ಬಡತನದಿಂದಾಗಿ ಓದು ಬರಹ ಇರಲಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು. ಹಿಂದಿ ವಿಶಾರದ ಕೂಡ ಮಾಡಿದ್ದರೆಂಬುದು ಉಲ್ಲೇಖಾರ್ಹ. ಸಂಗೀತ ಕಲಿತಿದ್ದ ಅವರನ್ನು, ಸದ್ಯ ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾಗಿರುವ ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ, ಯಕ್ಷಗಾನ ಕಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಈಗಿನ ತಾಲೂಕು ಕೇಂದ್ರ ಕಡಬ ಪರಿಸರವು ಅವರ ಯಕ್ಷಗಾನ ಕಲಿಕೆಗೆ ಪೂರಕವಾಗಿತ್ತು. ಮನೆ ಮನೆಯಲ್ಲೂ ವಿಶೇಷ ಶುಭ ಕಾರ್ಯಕ್ರಮವಿದ್ದರೆ ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿತ್ತು. ಹೀಗೆ ಕಲಿಯುತ್ತಲೇ, ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದದ್ದು ಇತಿಹಾಸ. ಪರಿಣಾಮ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ. ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 25ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ.

ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ, ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಪಡೆದುಕೊಂಡ ಲೀಲಾ ಅವರಿಗೆ, ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾರ್ಗದರ್ಶನ ಮಾಡಿ ಪ್ರೋತ್ಸಾಹಿಸುತ್ತಲೇ ಬಂದವರು ಪತಿ ಹರಿನಾರಾಯಣರು. ಬಲಿಪ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆ, ಮಾರ್ಗದರ್ಶನಗಳು ಅವರನ್ನು ಪ್ರಬುದ್ಧ ಕಲಾವಿದೆಯಾಗಿ ರೂಪಿಸಿದವು.

ಗಂಡು ಮೆಟ್ಟಿನ ಕಲೆಯಲ್ಲಿ ಅದರಲ್ಲೂ ವೀರರಸ ಪ್ರಧಾನ ಸನ್ನಿವೇಶಗಳಲ್ಲಿ ಹೆಣ್ಣು ಕಂಠವನ್ನು ಮೆರೆಸಿ, ಯಕ್ಷಗಾನ ಕಲೆಯತ್ತ ಮಹಿಳೆಯರೂ ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅವರು. ರಾತ್ರಿಯಿಡೀ ನಿದ್ದೆಗೆಟ್ಟು ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡಿದ್ದಷ್ಟೇ ಅಲ್ಲದೆ, ರಾತ್ರಿಯಿಡೀ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ ಕೀರ್ತಿಯೂ ಇದೆ. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನಲ್ಲಿ ತಮ್ಮ ಛಾಪು ಬೀರಿ ನಂದಿದ ನಂದಾದೀಪ ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಹಾಡುತ್ತಾ, ಅವರ ಮೆಚ್ಚುಗೆಗೂ ಪಾತ್ರರಾದವರು ಶ್ರೀಮತಿ ಲೀಲಾ.

ಕಳೆದ ಒಂದು ದಶಕದಲ್ಲಿ, ಬಡಗು ತಿಟ್ಟಿನ ರಂಗದಲ್ಲಿಯೂ ಅವರು ಸುಶ್ರಾವ್ಯವಾಗಿ ಹಾಡಿ, ಬಡಗು ತಿಟ್ಟಿನ ಯಕ್ಷಗಾನ ಕಲಾ ಪ್ರೇಮಿಗಳು ಮತ್ತು ಕಲಾವಿದರ ಮನಸ್ಸನ್ನೂ ಗೆದ್ದಿದ್ದಾರೆ. ಮುಂಬಯಿ, ದೆಹಲಿಯಲ್ಲಿಯೂ ಲೀಲಾ ಅವರು ತಮ್ಮ ಕಂಠ ಸಿರಿಯನ್ನು ಕೇಳಿಸಿದ್ದಾರೆ.

ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿರುವ ಅವರು, ಕಟೀಲು, ಮೂಡುಬಿದಿರೆ ಹಾಗೂ ತಮ್ಮದೇ ಮನೆಯಲ್ಲಿ ಹಲವು ಮಂದಿಗೆ ಭಾಗವತಿಕೆಯ ವಿದ್ಯೆಯನ್ನು ಧಾರೆ ಎರೆದಿದ್ದಾರೆ.

2021ರಲ್ಲಿ ಹರಿನಾರಾಯಣ-ಲೀಲಾವತಿ ದಂಪತಿಗೆ ಶಿಷ್ಯ ವೃಂದದವರು ಸೇರಿಕೊಂಡು "ಶ್ರೀಹರಿಲೀಲಾ 75" ಗೌರವಾಭಿವಂದನೆ ಕಾರ್ಯಕ್ರಮವನ್ನು ಏರ್ಪಡಿಸಿದ್ದುದು ಇತಿಹಾಸ.

ಕಿರು ಪರಿಚಯ:
* ಜೀವಿತಾವಧಿ: 23 ಮೇ 1947ರಿಂದ 14 ಡಿಸೆಂಬರ್ 2024
* ಹುಟ್ಟೂರು: ಕಾಸರಗೋಡಿನ ಮಧೂರು
* ಪತಿ: ಕೆ.ಹರಿನಾರಾಯಣ ಬೈಪಾಡಿತ್ತಾಯ
* ಮಕ್ಕಳು: ಗುರುಪ್ರಸಾದ್ ಹಾಗೂ ಅವಿನಾಶ್
* ಹೆತ್ತವರು: ಪುಂಡರೀಕಾಕ್ಷ ಹೆಬ್ಬಾರ್, ಮಹಾಲಕ್ಷ್ಮಿ ಅಮ್ಮ
* ವಿದ್ಯಾಭ್ಯಾಸ: ಬಲ್ಲವರಿಂದ ಕೇಳಿಯೇ ಅಕ್ಷರಾಭ್ಯಾಸ, ಖಾಸಗಿ ಹಿಂದಿ ವಿಶಾರದಾ
* ಶಾಸ್ತ್ರೀಯ ಸಂಗೀತ ತರಬೇತಿ: 7 ವರ್ಷ, ಮಧೂರು ಪದ್ಮನಾಭ ಸರಳಾಯರಲ್ಲಿ.
* ಯಕ್ಷಗಾನ ಒಡನಾಟ: 1972ರಿಂದೀಚೆಗೆ, 45 ವರ್ಷಕ್ಕೂ ಹೆಚ್ಚು
* ವಿಳಾಸ: ಕಲಾನುಗ್ರಹ, ತಲಕಳ ದೇವಸ್ಥಾನದ ಬಳಿ, ಅಂಚೆ ಕೊಳಂಬೆ, ಬಜ್ಪೆ (ವಯಾ), ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ – 574189

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು